ಬೆಂಗಳೂರು: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ವಿತಕರು ಹಣ ನೀಡದೇ, ನನ್ನ ಹಾಗೂ ಸುದೀಪ್ ಅವರ ಹೆಸರಿಗೆ ಅಪಖ್ಯಾತಿ ತರಲು ಸಂಚು ರೂಪಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆಸಲಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸೂರಪ್ಪ ಬಾಬು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಮ್ಮ ಸಂಸ್ಥೆಯಿಂದ ನಿರ್ಮಾಣಗೊಂಡ ಕೋಟಿಗೊಬ್ಬ 3 ಚಿತ್ರದ ಬಿಡುಗಡೆ, ಇದೇ ಅಕ್ಟೋಬರ್ 14 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ನಮ್ಮ ಸಿನಿಮಾ ವಿತರಣೆ ಹಕ್ಕನ್ನು ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ ವಿತರಣೆ ಪಡೆದ ಮೆಹಲ್ ಫಿಲ್ಮ್ಸ್ ಮಾಲೀಕರಾದ ಗೌತಮ್ ಚಂದ್ ರವರು ಮತ್ತು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ವಿತರಕರಾದ ಒ.ಆ ಖಾಜಾಪೀರ್ ಮತ್ತು ಕುಮಾರ್ ಫಿಲ್ಮ್ಸ್ ಮಾಲೀಕರಾದ ಕುಮಾರ್ ಅವರು ಮಾಡಿಕೊಂಡ ಕರಾರಿನ ಒಪ್ಪಂದದಂತೆ ಮುಂಗಡ ಹಣವಾಗಿ ಕೇವಲ 15% ಮಾತ್ರ ಪಡೆದು, ಚಿತ್ರ ಬಿಡುಗಡೆಯ ಒಂದು ದಿನ ಮೊದಲು ಅಂದರೆ 2021ರ ಅಕ್ಟೋಬರ್ 13ರಂದು ಚಿತ್ರದ ನಿರ್ಮಾಪಕರಿಗೆ ಬಾಕಿ ಹಣ ನೀಡಬೇಕೆಂದು ಒಪ್ಪಂದವಾಗಿರುತ್ತದೆ. ಇದನ್ನೂ ಓದಿ: ಸ್ಯಾಂಡಲ್ವುಡ್ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ
ಈ ಮೇಲೆ ತಿಳಿಸಿರುವ ಇಬ್ಬರು ವಿತರಕರು ಕಟ್ಟ ಕಡೆಯ ಸಮಯದಲ್ಲಿ ನಮಗೆ ಕೊಡಬೇಕಾದ ಹಣವನ್ನು ತಂದು ಕೊಡದೇ ನಮಗೆ ನಮ್ಮ ಕರೆಗಳಿಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸದೇ ನಮ್ಮ ಚಿತ್ರ ಅಂದುಕೊಂಡ ದಿನದಂದು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್
ಇವರ ಈ ತಪ್ಪಿನಿಂದ ನಾವು ಒಂದು ದಿನದ ನಂತರ ಸಾಕಷ್ಟು ಕಷ್ಟದಲ್ಲಿ ಬಿಡುಗಡೆ ಮಾಡಬೇಕಾಯಿತು. ಹಾಗಾಗಿ ಈ ಮೇಲೆ ತಿಳಿಸಿದ ವಿತರಕರ ತಪ್ಪಿನಿಂದ ನಮ್ಮ ಸಂಸ್ಥೆಗೆ ಸರಿ ಸುಮಾರು 8 ರಿಂದ 10 ಕೋಟಿ ನಷ್ಟವಾಗಿದೆ ಹಾಗೂ ನಮ್ಮ ಸಂಸ್ಥೆಗೂ ಈ ವಿತರಕರಿಗೂ ಆದ ಕರಾರಿನ ಪ್ರಕಾರ ಹಣ ನೀಡದೇ ನಮಗೆ ವಂಚನೆ ಎಸಗಿದ್ದು, ನಮಗೆ ಬಹಳಷ್ಟು ಆರ್ಥಿಕ ನಷ್ಟ ಉಂಟು ಮಾಡಿರುತ್ತಾರೆ. ನನ್ನ ಮತ್ತು ನಮ್ಮ ನಾಯಕ ನಟರಿಗೆ ಅಪಖ್ಯಾತಿ ತರಲು ಸಂಚು ಮಾಡಿರುತ್ತಾರೆ. ಅದಕ್ಕಾಗಿ ಮಾನನಷ್ಟ ಮೊಕದ್ದಮೆ ಸೇರಿದಂತೆ ಯಾವ ರೀತಿಯ ಕಾನೂನು ಕ್ರಮ ಜರುಗಿಸಬೇಕೆಂದು ನಮ್ಮ ಕಾನೂನು ಸಲಹೆಗಾರರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.