– ಇವತ್ತಲ್ಲ ನಾಳೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬಂದೇ ಬರುತ್ತೆ
ಕೊಪ್ಪಳ: ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು. ವೀರ ಸಾವರ್ಕರ್ ಗೆ ಭಾರತರತ್ನ ಕೊಟ್ಟರೆ ಸ್ವಾತಂತ್ರ ಯೋಧರಿಗೆ ಗೌರವ ಕೊಟ್ಟಂತೆ ಆಗುತ್ತೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಸಾವರ್ಕರನ್ನು ಹೀಯಾಳಿಸಿದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಅವಮಾನ ಮಾಡಿದಂತೆ ಆಗುತ್ತೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾವರ್ಕರ್ ಗೆ ಭಾರತ ರತ್ನ ಕೊಡುವುದರಲ್ಲಿ ತಪ್ಪಿಲ್ಲ. ಅದರಂತೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಲು ನಾವು ಸಿದ್ಧರಿದ್ದೇವೆ. ಇವತ್ತಲ್ಲ ನಾಳೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬಂದೇ ಬರುತ್ತೆ. ನಾವು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಕೂಡ ಸಲ್ಲಿಸುತ್ತೇವೆ. ಅನರ್ಹ ಶಾಸಕರು ಇನ್ನೂ ಪಕ್ಷ ಸೇರ್ಪಡೆ ಆಗಿಲ್ಲ. ಅವರು ಪಕ್ಷ ಸೇರ್ಪಡೆ ಬಳಿಕ ಟಿಕೆಟ್ ನೀಡೋದು ಬಿಡೋದು ತೀರ್ಮಾನವಾಗುತ್ತೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಕಳೆದ ಚುನಾವಣೆಗಿಂತ ಅಧಿಕ ಸ್ಥಾನ ಬಿಜೆಪಿ ಪಡೆಯಲಿದೆ. ನಾನು ಐದು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಜನರಿಗೆ ಬಿಜೆಪಿಯ ಬಗ್ಗೆ ನಂಬಿಕೆ ಇದೆ. ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೋ ಭವಿಷ್ಯ ನನಗೆ ಗೊತ್ತಿಲ್ಲ, ಮುಂದೆ ಏನು ಆಗುತ್ತೆ ಕಾದು ನೋಡ್ತೀನಿ ಎಂದು ಹೇಳಿದ್ದಾರೆ.