ಕೋಲಾರ: ಮೋದಿಯ ಬಿರುಗಾಳಿ ಅಲೆ, ಜನತಾದಳದ ಕಾರ್ಯಕರ್ತರು ಪೂರ್ತಿ ಪ್ರಮಾಣದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡದೇ ಇರುವುದು ಹಾಗೂ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರ ಭಿನ್ನಾಭಿಪ್ರಾಯದಿಂದ ನಾನು ಸೋತಿದ್ದೇನೆ ಎಂದು ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಸೋತ ನಂತರ ಇದೇ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸಿ ತಮ್ಮ ಪರವಾಗಿ ಮತ ಹಾಕಿರುವ ಐದು ಲಕ್ಷ ಮತದಾರರಿಗೆ ಧನ್ಯವಾದ ತಿಳಿಸಿದರು.
- Advertisement 2
- Advertisement 3
ಕಳೆದ ಬಾರಿಗಿಂತ ಈ ಬಾರಿ ಒಂದು ಲಕ್ಷ ಮತಗಳು ಹೆಚ್ಚಿಗೆ ಬಂದಿವೆ ಇವತ್ತಿನಿಂದಲೇ ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಹಾಗೂ ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತೆ ಕೆಲಸ ಮಾಡುತ್ತೇವೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ಮಾತೇ ಇಲ್ಲ. ಇವತ್ತು ಸಂಜೆ 7 ಗಂಟೆಗೆ ಕಾಂಗ್ರೆಸ್ನ ಉಸ್ತುವಾರಿಯಾದ ವೇಣುಗೋಪಾಲ್ ನನ್ನನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ವೀರಪ್ಪ ಮೊಯ್ಲಿ ಮೂವರನ್ನು ಬೆಂಗಳೂರಿನಲ್ಲಿ ಚರ್ಚೆಗೆ ಕರೆದಿದ್ದಾರೆ. ಅಲ್ಲಿ ನಮ್ಮ ಸೋಲಿನ ಪರಾಮರ್ಶೆ ಮಾಡಿ ಮುಂದೆ ಪಕ್ಷ ಕಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
- Advertisement 4
ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಇತಿಹಾಸದಲ್ಲೇ ಇಷ್ಟು ಪ್ರಮಾಣದಲ್ಲಿ ಯಾರು ಸಾಲ ಮನ್ನಾ ಮಾಡಿಲ್ಲ. ಆದರೂ ಜನರು ನಮ್ಮನ್ನು ಸೋಲಿಸಿದ್ದಾರೆ. ಇನ್ನು ಮುಂದೆ ಜೆಡಿಎಸ್ಗೆ ಸಂಪೂರ್ಣ ಸಹಕಾರ ಕೊಟ್ಟು ಸರ್ಕಾರ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಳೆದ 28 ವರ್ಷಗಳಿಂದ ನನಗೆ ಬೆಂಬಲ ನೀಡಿದ ಜಿಲ್ಲೆಯ ಜನರಿಗೆ ಧನ್ಯವಾದಗಳು. ಸತತವಾಗಿ ನಾನು ಜನರೊಟ್ಟಿಗೆ ಇರುತ್ತೇನೆ. ಸೋತ ನಂತರ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ತಿಳಿಸಿದರು.