ಚಿಕ್ಕಮಗಳೂರು: ಮೈಮೇಲೆ ಗಾಯವಾಗಿದ್ದ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗಲ್ಲು ಗ್ರಾಮದ ರಿಚರ್ಡ್ ಲೋಬೋ ಅವರ ತೋಟದಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಂಡು ಬಂದಿದೆ. ಆದರೆ ಅದರ ಮೈಮೇಲೆ ಗಾಯವಾಗಿದ್ದರಿಂದ ತೆವಳಲಾಗದೆ ನಾಲ್ಕು ದಿನದಿಂದ ಒಂದೇ ಜಾಗದಲ್ಲಿ ನಿತ್ರಾಣಗೊಂಡು ಬಿದ್ದಿದೆ.
ಸರ್ಪವನ್ನ ನೋಡಿದ ತೋಟದ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಗಾಬರಿಯಾಗಿದ್ದರು. ಬಳಿಕ ಉರಗ ತಜ್ಞ ನರೇಶ್ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಸ್ನೇಕ್ ನರೇಶ್, ಕಾಳಿಂಗನನ್ನ ಸೆರೆ ಹಿಡಿದು ಸ್ಥಳೀಯ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಕಾಳಿಂಗ ಸ್ವಲ್ಪ ಸುಧಾರಿಸಿದ ನಂತರ ಅದನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಬೃಹತ್ ಕಾಳಿಂಗನನ್ನ ಸೆರೆ ಹಿಡಿದ ಮೇಲೆ ತೋಟದ ಮಾಲೀಕ ಹಾಗೂ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.