ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗಿದ್ದು, 3ನೇ ಅಲೆಯ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಆದರೆ ಕೇರಳದಿಂದ ರಾಜ್ಯಕ್ಕೆ ಬರುತ್ತಿರುವ ಪ್ರಯಾಣಿಕರಿಗೆ ತಪಾಸಣೆ ನಡೆಸದೇ ಇರುವುದು ತೀವ್ರ ಆತಂಕಕ್ಕೆ ಎಡೆ ಮಾಡಿದೆ.
ನಿನ್ನೆಯಷ್ಟೇ ಕೋವಿಡ್ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳ ಮುನ್ಸೂಚನೆ ನೀಡಿತ್ತು. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಇದ್ಯಾವ ಕ್ರಮಗಳೂ ಜಾರಿಗೆ ಬಂದಂತೆ ಕಾಣಿಸಲಿಲ್ಲ. ಇದನ್ನೂ ಓದಿ: ಓಮಿಕ್ರಾನ್ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ: ಡಬ್ಲ್ಯೂಎಚ್ಒ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್
ಸಾಮಾನ್ಯವಾಗಿ ರಾಜ್ಯಕ್ಕೆ ಎಂಟ್ರಿಯಾಗುವ ಗಡಿಗಳಲ್ಲಿ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತಾರೆ. ಕೊರೊನಾ ನೆಗಟಿವ್ ರಿಪೋರ್ಟ್ ಇಲ್ಲದಿದ್ದರೇ ಅಧಿಕಾರಿಗಳು ಪ್ರಯಾಣಿಕರನ್ನು ಬಸ್ನಿಂದ ಕೆಳಗಿಳಿಸುತ್ತಾರೆ. ಆದರೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬರುತ್ತಿರುವ ಕೇರಳದ ಪ್ರಯಾಣಿಕರಿಗೆ ತಪಾಸಣೆಯನ್ನು ನಡೆಸುತ್ತಿಲ್ಲ. ಇದು ಜನರಲ್ಲಿ ಭೀತಿ ಹುಟ್ಟಿಸಿದೆ.
ಕೇರಳದಿಂದ ಬಂದ ಪ್ರಯಾಣಿಕನಿಗೆ ಮಾರ್ಷಲ್ಸ್ಗಳು ನೆಗೆಟಿವ್ ರಿಪೋರ್ಟ್ ತೋರಿಸಲು ತಿಳಿಸಿದಾಗ ಆ ಪ್ರಯಾಣಿಕ ತನ್ನ ಉದ್ಧಟತನ ಪ್ರದರ್ಶಿಸಿದ್ದಾನೆ. ದಂಡ ಕಟ್ಟದೇ ಮಾರ್ಷಲ್ಸ್ಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಕೊನೆಗೂ ಪ್ರಯಾಣಿಕ ದಂಡ ಕಟ್ಟಿ ಹೊರಟಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಒಮಿಕ್ರಾನ್ ಆತಂಕ – ಸೋಂಕಿತ ರಾಷ್ಟ್ರಗಳಿಂದ ಬರೋರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ
ಬೆಂಗಳೂರಿನಲ್ಲೂ ಕೊರೊನಾ ರೂಪಾಂತರಿ ಓಮಿಕ್ರಾನ್ ಭೀತಿ ಕಾಡಲಾರಂಭಿಸಿದೆ. ಜನ ವಸತಿ ಪ್ರದೇಶಗಳಲ್ಲಿ ಮಾಸ್ಕ್ ತಪಾಸಣೆ ಚುರುಕಾಗಿ ನಡೆಯುತ್ತಿದೆ. ಕಾಲೇಜ್, ಬಸ್ ನಿಲ್ದಾಣ, ಮಾರ್ಕೆಟ್, ಇತರೆ ಜನ ಸೇರುವ ಪ್ರದೇಶಗಳಲ್ಲಿ ಮಾಸ್ಕ್ ಹಾಕದವರಿಗೆ ಬುದ್ಧಿ ಹೇಳಿ ದಂಡ ಹಾಕುತ್ತಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಆಯಾ ವಲಯದ ಮಾರ್ಷಲ್ಸ್ಗಳಿಗೆ ಮೇಲಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ. ಈ ಹಿನ್ನೆಲೆ ಇಂದಿನಿಂದ ಮತ್ತೆ ಕೊರೊನಾ ಮಾರ್ಗಸೂಚಿಗಳು ಚುರುಕಾಗಲಿದೆ.