ಚಿಕ್ಕಬಳ್ಳಾಪುರ: ಕೆಇಬಿ ನೌಕರನ ಮೇಲೆ ಕಾಂಗ್ರೆಸ್ ನಗರಸಭೆ ಸದಸ್ಯೆ, ಆಕೆಯ ಪತಿ ಮಾರಣಾಂತಿಕ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಮಂಜುನಾಥ್ ಹಲ್ಲೆಗೊಳಗಾದ ಕೆಇಬಿ ನೌಕರ. ವಿವಿಪುರಂ ಬಡಾವಣೆಯಲ್ಲಿ ಗೌರಿಬಿದನೂರು ನಗರಸಭೆಯ ಕಾಂಗ್ರೆಸ್ ನಗರಸಭಾ ಸದಸ್ಯೆ ಕಲ್ಪನಾ ಹಾಗೂ ಆಕೆಯ ಪತಿ ರಮೇಶ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕಾಗಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗಾಯಾಳು ಮಂಜುನಾಥ್ ಗೌರಿಬಿದನೂರು ಪುರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಜುನಾಥ್ ಅಸಭ್ಯವಾಗಿ ವರ್ತಿಸಿ, ನಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ನಗರಸಭೆ ಸದಸ್ಯೆ ಕಲ್ಪನಾ ಕೂಡಾ ಎಂದು ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರಸಭೆ ಸದಸ್ಯೆ ಕಲ್ಪನಾ ಅವರ ಪತಿ ರಮೇಶ್ ಮೈಮೇಲೆ ಮಂಜುನಾಥ್ ಎಂಜಲು ಉಗುಳಿದ್ದಾನೆ. ಇದರಿಂದ ಕೋಪಕೊಂಡ ರಮೇಶ್ ಮಂಜುನಾಥ್ ವಾದಕ್ಕೆ ಮುಂದಾಗಿದ್ದಾರೆ. ವಾದ ವಿಕೋಪಕ್ಕೆ ಹೋಗಿ ಪರಸ್ಪರ ಕಿತ್ತಾಡಿದ್ದಾರೆ. ಈ ಕುಟುಂಬದ ಮಧ್ಯೆ ಇದೇ ಮೊದಲ ಜಗಳವಲ್ಲ. ಕಳೆದ 10 ವರ್ಷಗಳಲ್ಲಿ ಅನೇಕ ಬಾರಿ ಜಗಳ ನಡೆದಿದ್ದು, ಹಿಂದೆಯೂ ಕೆಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರಂತೆ.
ಗಾಯಾಳು ಮಂಜುನಾಥ್ ಸದಾ ವಿಚಿತ್ರವಾಗಿ ವರ್ತಿಸುತ್ತಾನೆ. ನೆರೆಹೊರೆಯವರ ಜೊತೆ ಹೊಂದಿಕೊಳ್ಳದ ಮಂಜುನಾಥ್ ಹಾಗೂ ಆತನ ಪತ್ನಿ ಸಣ್ಣ-ಪುಟ್ಟ ಕಾರಣಗಳಿಗೂ ಪದೇ ಪದೇ ಅಕ್ಕಪಕ್ಕದ ಮನೆಯವರೊಂದಿಗೆ ಜಗಳಕ್ಕೆ ಮುಂದಾಗುತ್ತಾನೆ ಎನ್ನುವ ಆರೋಪ ಕೇಳಿ ಬಂದಿದೆ.