ಕಾರವಾರ: ಮುಖ್ಯಮಂತ್ರಿಯಾಗಿ ನಂತರ ಸಚಿವನಾಗಿದ್ದಕ್ಕೆ ಬೇಸರವಿಲ್ಲ ಎಂದು ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯ ನೆರೆ ಪೀಡಿತ ಪ್ರದೇಶವಾದ ಅಂಕೋಲದ ಡೋಂಗ್ರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ವಿರೋಧ ಪಕ್ಷಕ್ಕೆ ಟೀಕೆ ಮಾಡಲು ಯಾವುದೇ ವಿಷಯವಿಲ್ಲ. ಅವರಂತೂ ಯಾವ ಪ್ರದೇಶಕ್ಕೂ ಹೋಗಿ ಸಾಂತ್ವನ ಹೇಳಲಿಲ್ಲ. ಆದರೆ ನಮ್ಮಲ್ಲಿ ಮುಖ್ಯಮಂತ್ರಿಯವರೇ ಸ್ವತಃ ಹೋಗಿದ್ದಾರೆ. ಈಗ ಸಚಿವನಾಗಿ ಹೋಗುತ್ತಿದ್ದೇನೆ ಎಂದು ತಿಳಿಸಿದರು.
ಈ ವೇಳೆ ಮುಖ್ಯಮಂತ್ರಿಯಾಗಿ ನಂತರ ಸಚಿವನಾಗಿದ್ದಕ್ಕೆ ಬೇಸರವಿಲ್ಲ. ಪಕ್ಷ ಯಾವ ಜವಾಬ್ದಾರಿ ನಿಬಾಯಿಸಬೇಕು ಎಂದು ಹೇಳಿದೆಯೋ ಆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಇದರಲ್ಲಿ ಮುಜುಗರ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ನಾನು ಯಾರ ಕೆಳಗೆ ಕೆಲಸ ಮಾಡುತ್ತೇನೆ ಎನ್ನುವುದು ಮುಖ್ಯ. ಪಕ್ಷದ ಹಿರಿಯ ನಾಯಕರ ಕೈ ಕೆಳಗೆ ಕೆಲಸ ಮಾಡಲು ಮುಜುಗರವಿಲ್ಲ ಎಂದರು.
ಹೊಸ ಸರ್ಕಾರದ ಸಂಪುಟ ರಚನೆಯಾದಾಗ ಅಸಮಧಾನ ಇರುವುದು ಸಹಜವಾದಂತಹದ್ದು, ಹೀಗಾಗಿ ಕೆಲವರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪಕ್ಷದ ಪ್ರಮುಖರು ಮತ್ತು ಮುಖ್ಯಮಂತ್ರಿ ಯವರು ಅವರನ್ನು ಸಂಪರ್ಕ ಮಾಡಿ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸುಭದ್ರವಾಗಿರುತ್ತದೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಅವರು ಜುಲೈ 12, 2012 ರಿಂದ 2013 ಮೇ 8ರ ಕರ್ನಾಟಕ ರಾಜ್ಯದ 21 ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಆದರೆ ಕಳೆದ ಮಂಗಳವಾರ ರಚನೆಯಾದ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವನಾಗಿ ಆಯ್ಕೆ ಆಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟೀಕೆ ಮಾಡಿದ್ದರು.