ಬೆಂಗಳೂರು: ಕರ್ನಾಟಕದ ಮುಜರಾಯಿ ಇಲಾಖೆಯಲ್ಲಿನ ನಿಯಮ ಬದಲಾವಣೆಗೆ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಸ್ಫೂರ್ತಿಯಾಗಿದ್ದಾರೆ.
ಹೌದು. ಸಿದ್ದರಾಮಯ್ಯನವರು ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇಗುಲದಲ್ಲಿ ಎಲ್ಲಾ ಜಾತಿಯವರು ಅರ್ಚಕರಾಗಲು ಅವಕಾಶ ಕಲ್ಪಿಸಿ, ಆಗಮ ಶಾಲೆಯನ್ನು ತೆರೆಯಲು ಆದೇಶ ನೀಡಿದ್ದರ ಹಿಂದೆ ಕರುಣಾನಿಧಿಯವರ ಪ್ರೇರಕ ಶಕ್ತಿ ಕೆಲಸ ಮಾಡಿತ್ತು.
ಕರುಣಾನಿಧಿಯವರು ಬ್ರಾಹ್ಮಣೇತರರಿಗೂ ದೇಗುಲದ ಅರ್ಚಕರಾಗಲು ಅವಕಾಶ ಕಲ್ಪಿಸಲು 47 ವರ್ಷದ ಹಿಂದೆಯೇ ತಮಿಳುನಾಡಲ್ಲಿ ಬಾರೀ ಹೋರಾಟ ನಡೆಸಿದ್ದರು. ಅಲ್ಲದೇ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಯಾರು ಬೇಕಾದರೂ ದೇಗುಲದ ಅರ್ಚಕರಾಗಬಹುದು ಎಂದು ಕಾಯ್ದೆಯನ್ನು ಜಾರಿಗೆ ತಂದಿದ್ದರು.
ಈ ಕಾಯ್ದೆಯನ್ನು ವಿರೋಧಿಸಿ ತಮಿಳುನಾಡಿನಲ್ಲಿ ಭಾರೀ ಹೋರಾಟವೇ ನಡೆದಿತ್ತು. 2006 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಈ ಕಾಯ್ದೆಯನ್ನು ಜಾರಿಗೊಳಿಸಿಯೇ ಬಿಟ್ಟರು. ಕರುಣಾನಿಧಿಯವರು ದಲಿತರು ಸೇರಿದಂತೆ ಎಲ್ಲರಿಗೂ ಅರ್ಚಕರಾಗೋದಕ್ಕೆ ಆಗಮ ಶಾಲೆಯನ್ನು ಸಹ ಪ್ರಾರಂಭಿಸಿದ್ದರು.
ಕರುಣಾನಿಧಿಯವರ ಪ್ರೇರಣೆಯಿಂದ ತಮಿಳುನಾಡಿನಲ್ಲಿ ತಂದ ಬದಲಾವಣೆಗಳನ್ನು ಕರ್ನಾಟಕದಲ್ಲೂ ಜಾರಿಗೆ ತರಲು ಸಿದ್ದರಾಮಯ್ಯ ಮುಂದಾದರು. ದಲಿತ ಅರ್ಚಕರನ್ನು ನಾವು ಯಾಕೆ ಮುಜರಾಯಿ ದೇವಾಲಯದಲ್ಲಿ ನೇಮಿಸಬಾರದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಹೀಗಾಗಿ ಈಗ ಕರ್ನಾಟಕದಲ್ಲೂ ದಲಿತರು ಸಂಸ್ಕೃತದಲ್ಲಿ ಆಗಮ ಶಾಸ್ತ್ರಗಳನ್ನು ಕಲಿಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews