ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಸಿಬಿಐ (CBI) ತನಿಖೆಯನ್ನು ಹಿಂಪಡೆಯುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇಂದು ಸಂಜೆ ನಡೆದ ಸಭೆಯಲ್ಲಿ, ಡಿಕೆ ಶಿವಕುಮಾರ್ ವಿರುದ್ಧದ ಈ ಪ್ರಕರಣ ರಾಜಕೀಯ ಪ್ರೇರಿತ ಎಂದು ಭಾವಿಸಿದ ಸಂಪುಟ ಸಭೆ (Cabinet Meeting), ಗೃಹ ಇಲಾಖೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಅಕ್ರಮ ಆಸ್ತಿ ಪ್ರಕರಣದ (Disproportionate Assets Case) ತನಿಖೆಯನ್ನು ಸಿಬಿಐಗೆ ವಹಿಸಿ 2019ರಲ್ಲಿ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಬಿಜೆಪಿ ಸರ್ಕಾರ (BJP Govt) ಹೊರಡಿಸಿದ್ದ ಈ ಆದೇಶವನ್ನು ಹಿಂಪಡೆಯಲು ಇದೀಗ ಗೃಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ಸಿಬಿಐ ತನಿಖೆಯ ಆದೇಶವನ್ನು ಹಿಂಪಡೆದು ಪ್ರಕರಣವನ್ನು ರಾಜ್ಯ ಪೊಲೀಸ್ ಇಲಾಖೆ ಅಥವಾ ಲೋಕಾಯುಕ್ತ ತನಿಖೆಗೆ ಹಸ್ತಾಂತರಿಸುವಂತೆ ಗೃಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಗೃಹ ಇಲಾಖೆ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಂದ ಅಭಿಪ್ರಾಯವನ್ನೂ ಪಡೆದಿದೆ. 28 ಪುಟಗಳ ಅಭಿಪ್ರಾಯ ನೀಡಿರುವ ಅಡ್ವೋಕೇಟ್ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶವನ್ನು ವಾಪಸ್ ಪಡೆದು, ಅದನ್ನು ಪೊಲೀಸ್ ಇಲಾಖೆ ಅಥವಾ ಲೋಕಾಯುಕ್ತಕ್ಕೆ ವಹಿಸಬಹುದು ಎಂದು ಅಭಿಪ್ರಾಯ ನೀಡಿದ್ದಾರೆ. ಇದರ ಆಧಾರದ ಮೇಲೆ, ಹಿಂದಿನ ಸರ್ಕಾರವು ಸಿಬಿಐ ತನಿಖೆಗೆ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯಬೇಕು ಎಂಬ ಪ್ರಸ್ತಾವನೆಯನ್ನು ಗೃಹ ಸಚಿವ ಪರಮೇಶ್ವರ್ (G Parameshwar) ಅನುಮೋದಿಸಿದ್ರು.
ಏನಿದು ಪ್ರಕರಣ?: 2017 ರಲ್ಲಿ ಡಿ.ಕೆ ಶಿವಕುಮಾರ್ ವಾಸ್ತವ್ಯವಿದ್ದ ಈಗಲ್ಟನ್ ರೆಸಾರ್ಟ್ ಮತ್ತು ಅವರ ಸಹಚರರ ಮೇಲೆ ದಾಳಿ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ ಸುಮಾರು 8.59 ಕೋಟಿ ಹಣ ವಶಪಡಿಸಿಕೊಂಡಿತ್ತು. ಲೆಕ್ಕಕ್ಕೆ ಸಿಗದ ಈ ಹಣವನ್ನು ಡಿ.ಕೆ ಶಿವಕುಮಾರ್ ತಮ್ಮ ಸಹಚರರ ಬಳಿ ಇರಿಸಿದ್ದರು ಎಂದು ಆರೋಪಿಸಿತ್ತು. ಇದೇ ಪ್ರಕರಣದಲ್ಲಿ ಇಡಿ ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಿತ್ತು. ಐಟಿ ಇಲಾಖೆ ನೀಡಿದ ಮಾಹಿತಿ ಆಧರಿಸಿ ಜಾರಿ ನಿರ್ದೇಶನಾಲಯ ವಿರುದ್ಧ ತನಿಖೆ ಆರಂಭಿಸಿತ್ತು. ಇಡಿ ತನಿಖೆಯನ್ನು ಆಧರಿಸಿ ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಲು ಸಿಬಿಐ ರಾಜ್ಯ ಸರ್ಕಾರದಿಂದ ಅನುಮತಿ ಕೋರಿತ್ತು. ಸರ್ಕಾರ 2019ರ ಸೆ.25ರಂದು ಅನುಮತಿ ನೀಡಿದ ಬೆನ್ನಲ್ಲೇ 2020ರ ಅಕ್ಟೋಬರ್ 3 ರಂದು ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. 2013ರಿಂದ 2018ರ ವರೆಗಿನ ಆದಾಯಗಳಿಕೆ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿತ್ತು.