ಬೆಂಗಳೂರು: ನಾಟಕೀಯ ತಿರುವುಗಳು, ಕಾನೂನು ಹೋರಾಟಗಳ ಆತಂಕದ ಮಧ್ಯೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವ್ರಿಗೆ ಬಹುಮತ ಸಾಬೀತುಪಡಿಸುವ ಮುನ್ನವೇ ಸುಪ್ರೀಂ ಪರೀಕ್ಷೆ ಎದುರಾಗಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಸಲ್ಲಿಸಿರೋ ಅರ್ಜಿಯ ವಿಚಾರಣೆ ಇಂದು ಕೂಡ ಮುಂದುವರೆಯಲಿದೆ. ಸುಪ್ರೀಂಕೋರ್ಟ್ ನ ತ್ರಿಸದಸ್ಯಪೀಠ ಗುರುವಾರ ಸೂಚಿಸಿದ್ದ ಪ್ರಕಾರ, ರಾಜ್ಯಪಾಲರಿಗೆ ಸಲ್ಲಿಸಲಾದ ಶಾಸಕರ ಬೆಂಬಲ ಪತ್ರವನ್ನು ಬಿಎಸ್ವೈ ಇಂದು ಹಾಜರುಪಡಿಸಬೇಕಿದೆ. ಮಂಗಳವಾರ ಮತ್ತು ಬುಧವಾರ ಯಡಿಯೂರಪ್ಪ ಸರ್ಕಾರ ರಚೆನೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ಎರಡು ಪತ್ರಗಳನ್ನು ನೀಡಿದ್ದರು. ಬಿಎಸ್ವೈ ಸಲ್ಲಿಸುವ ಈ ಬೆಂಬಲ ಪತ್ರಗಳಲ್ಲಿ ಕಂಟೆಂಟ್ ಆಧಾರದ ಮೇಲೆ ಇವತ್ತು ವಿಚಾರಣೆ ನಡೆಯೋ ಸಾಧ್ಯತೆಗಳಿವೆ.
ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ, ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್, ಬಿಎಸ್ವೈ ಪರ ಮುಕುಲ್ ರೊಹ್ಟಗಿ ವಾದ ಮಂಡಿಸಲಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ರಾಜ್ಯಪಾಲರ ನಡೆ ಪ್ರಶ್ನಿಸಿದ ಜೇಠ್ಮಲಾನಿ ಕೂಡ ತಮ್ಮ ವಾದ ಮಂಡಿಸುವ ಸಾಧ್ಯತೆಗಳಿವೆ. ಈ ನಡುವೆ ಬಿಜೆಪಿಗೆ ಅನುಕೂಲ ಮಾಡಿಕೊಡಲು ರಾಜ್ಯಪಾಲರು ಆಂಗ್ಲೋ ಇಂಡಿಯನ್ ಶಾಸಕರಾಗಿ ವಿನಿಶಾ ನಿರೋರಾ ನಾಮನಿರ್ದೇಶನಕ್ಕೆ ರಾಜ್ಯಪಾಲರು ತರಾತುರಿಯಲ್ಲಿ ಅಂಕಿತ ಹಾಕಿದ್ದಾರೆ ಆರೋಪಿಸಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಮತ್ತೊಂದು ಅರ್ಜಿ ಸಲ್ಲಿಸಿದೆ. ಈ ಅರ್ಜಿಯೂ ಇಂದೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು..?
* 104 ಶಾಸಕರನ್ನು ಹೊರತುಪಡಿಸಿ ನಿಮ್ಮ ಬೆಂಬಲಕ್ಕಿರುವ ಶಾಸಕರು ಯಾರು ಎಂದು ಪ್ರಶ್ನಿಸಬಹುದು.
* 104 ಶಾಸಕರಷ್ಟೇ ನಿಮ್ಮ ಬಳಿ ಇದ್ದಾರೆ.. ಬಹುಮತ ಹೇಗೆ ಸಾಬೀತುಪಡಿಸುವಿರಿ ಎಂದು ಪ್ರಶ್ನೆ ಮಾಡಬಹುದು.
* ಬಹುಮತ ಸಾಬೀತಿಗೆ ನೀಡಲಾದ ಕಾಲಾವಕಾಶವನ್ನು ಕಡಿಮೆ ಮಾಡಬಹುದು.
* ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಬಿಎಸ್ವೈಗೆ ಸೂಚಿಸಬಹುದು.
* ಶಾಸಕರ ಪ್ರಮಾಣ ಸ್ವೀಕಾರಕ್ಕೆ ಮುನ್ನ ಅನ್ವಯ ಆಗಲ್ಲವೇ.. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗಲ್ಲವೇ ಎಂಬ ಬಗ್ಗೆ ಚರ್ಚೆ ನಡೆಯಬಹುದು.
ಗುರುವಾರ ವಿಚಾರಣೆ ವೇಳೆ ಅಟಾರ್ನಿ ಜನರಲ್ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವಷ್ಟೇ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಎಂದು ಹೇಳಿದ್ದರು.