ಬೆಂಗಳೂರು: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್ ವರ್ತಕರಿಗೆ ವ್ಯಾಪಾರಕ್ಕೆ ನಿರ್ಬಂಧ ವಿಚಾರ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿ ಮಾಡಿತ್ತು.
ಕಾಂಗ್ರೆಸ್ ಮುಸ್ಲಿಂ ಶಾಸಕರು ಮತ್ತು ಬಿಜೆಪಿಯ ಕರಾವಳಿ ಭಾಗದ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ವ್ಯಾಪಾರ ನಿರ್ಬಂಧದ ಭಿತ್ತಿಪತ್ರ ಹಾಕಿದವರು ಹೇಡಿಗಳು, ಕ್ರೂರಿಗಳ ಎಂದ ಖಾದರ್ ಹೇಳಿಕೆ ಗದ್ದಲವನ್ನು ಎಬ್ಬಿಸಿತು. ಶೂನ್ಯ ವೇಳೆಯಲ್ಲಿ ಶಾಸಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ ರಾಜ್ಯದ ಕೆಲ ಕಡೆ ಧಾರ್ಮಿಕ ಕೇಂದ್ರಗಳಲ್ಲಿ ಕೆಲವು ಧರ್ಮದವರು ವ್ಯಾಪಾರ ಮಾಡಬಾರದು ಎಂದು ಬ್ಯಾನರ್ ಹಾಕ್ತಾರೆ, ಈ ರೀತಿ ಬ್ಯಾನರ್ ಹಾಕಿ ನಿಬರ್ಂಧ ಮಾಡಿರೋರು ಹೇಡಿಗಳು, ಕ್ರೂರಿಗಳು ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್
ಖಾದರ್ ಹೇಳಿಕೆಗೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಹೇಡಿಗಳು ಎಂದು ಯಾರಿಗೆ ಹೇಳೋದು? ಎಂದು ಸಿಟ್ಟಾದ ಉಡುಪಿ ಜಿಲ್ಲೆಯ ಶಾಸಕರು, ಮಂಗಳೂರು ಜಿಲ್ಲೆಯ ಶಾಸಕರು ಕಿಡಿಕಾರಿದ್ರು. ಆಗ ನಾನು ಯಾವುದೇ ಧರ್ಮದವರನ್ನು ಪ್ರಸ್ತಾಪ ಮಾಡಿಲ್ಲ ಎಂದು ಖಾದರ್ ಸಮರ್ಥನೆಗೆ ಇಳಿದ್ರು. ಆಗ ಮತ್ತೆ ಖಾದರ್ ಮೇಲೆ ಬಿಜೆಪಿ ಶಾಸಕರಾದ ಹರೀಶ್ ಪೂಂಜಾ, ರಘುಪತಿ ಭಟ್, ರೇಣುಕಾಚಾರ್ಯ, ಸತೀಶ್ ರೆಡ್ಡಿ ಮುಗಿಬಿದ್ದು ಆಕ್ರೋಶ ಹೊರಹಾಕಿದರು.
ಬಿಜೆಪಿ ಶಾಸಕ ಕೆ.ಜಿ ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿ, ಹಿಜಬ್ ವಿಚಾರವಾಗಿ ಹೈಕೋರ್ಟ್ ಆದೇಶ ಬಂದರೂ ಬಂದ್ ಮಾಡ್ತಾರೆ ಹೇಡಿಗಳು ಎಂಬ ಶಬ್ಧ ಬಳಕೆ ಯಾರಿಗೆ ಮಾಡ್ತಾರೆ ಎಂದು ಕಿಡಿಕಾರಿದರು. ನಕಲಿ ಸರ್ಟಿಫಿಕೇಟ್ ಪಡೆದು ಇಲ್ಲಿ ಬಂದು ಕುಳಿತವರು ನೀವು ಎಂದು ರೇಣುಕಾಚಾರ್ಯಗೆ ಖಾದರ್ ಟಾಂಗ್ ನೀಡಿದಾಗ ಏಯ್ ಕೂತ್ಕೂಳಲೋ ಎಂದು ಜಮೀರ್ಗೆ, ರೇಣುಕಾಚಾರ್ಯ ಗದರಿದ್ರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಗೊಂದಲಕ್ಕೀಡಾಗಿ ಏನಾಗ್ತಿದೆ ಇಲ್ಲಿ, ಕಾನೂನು ಸಚಿವರು ಸಮಾಧಾನಪಡಿಸುವಂತೆ ಸ್ಪೀಕರ್ ಸೂಚಿಸಿದ್ರು. ಬಳಿಕ ಶಾಸಕರ ಸ್ಥಳಗಳಿಗೆ ಹೋಗಿ ಸಚಿವ ಮಾಧುಸ್ವಾಮಿ ಸಮಾಧಾನಪಡಿಸಿದರು. ಇದನ್ನೂ ಓದಿ: ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ
ಬಳಿಕ ಮಾತನಾಡಿದ ಯು.ಟಿ.ಖಾದರ್, ಹಿಂದೂ ಸಹೋದರರನ್ನು ಗೌರವಿಸುತ್ತೇನೆ. ನಾವೆಲ್ಲ ಚೆನ್ನಾಗಿದ್ದೇವೆ, ಪೊಲೀಸ್ ಮಾಡುವ ಕೆಲಸವನ್ನು ಕೆಲ ಹಿಂದೂ ಸಹೋದರರು ಮಾಡಿದ್ದಾರೆ. ಸಮಾಜದಲ್ಲಿ ವೈಮನಸ್ಸು ಉಂಟು ಮಾಡುವ ಕೆಲಸ ಮಾಡಬಾರದು. ಮಂಗಳೂರು, ಉಡುಪಿ, ಶಿವಮೊಗ್ಗ, ಶಿರಸಿ, ನೆಲಮಂಗಲದಲ್ಲಿ ಭಿತ್ತಿಪತ್ರಗಳನ್ನು ಹಾಕಿರುವವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಶಾಸಕ ರಿಜ್ವಾನ್ ಅರ್ಷಾದ್ ಪ್ರಸ್ತಾಪ ಮಾಡಿ, ಇವತ್ತು ಒಂದು ವರ್ಗದ ವ್ಯಾಪಾರಿಗಳು ವ್ಯಾಪಾರ ಮಾಡಬಾರದು ಎಂಬ ಬಿತ್ತಿಪತ್ರ ಹಾಕಿರೋದು ಸಮಾಜಕ್ಕೆ ಅಘಾತಕಾರಿ. ಯಾವ ಸಂಘಟನೆಗೂ ಸತ್ಯ ಗೊತ್ತಿಲ್ಲ ಅನ್ಸುತ್ತೆ, ಬಪ್ಪನಾಡು, ಮಾರಿಗುಡಿ ದೇವಾಲಯ ಸ್ಥಾಪನೆಗೆ ಮುಸ್ಲಿಂ ಸಮುದಾಯವರು ಕೂಡ ಕೈ ಜೋಡಿಸಿದ್ದಾರೆ. ಯಾರೂ ಇತಿಹಾಸವನ್ನು ಅಳಿಸಲು ಆಗಲ್ಲ. ಈ ಮಟ್ಟಕ್ಕೆ ಹೋಗುವುದು ಸರಿಯಲ್ಲ, ಬಹಿಷ್ಕಾರ ಹಾಕುವುದು ಸರಿ ಅಲ್ಲ ಎಂದರು. ಆಗ ತಕ್ಷಣವೇ ಎದ್ದ ಉಡುಪಿ ಶಾಸಕ ರಘುಪತಿ ಭಟ್ ಹಿಜಬ್ ವಿಚಾರದಲ್ಲಿ ಭಿತ್ತಿಪತ್ರ ಹಾಕಿದ್ರಲ್ಲಾ ಅದು ಸರಿನಾ? ಎಂದು ಕಿಡಿಕಾರಿದ್ರು. ಇನ್ನೊಂದೆಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಫ್ರೀ ಟ್ರೇಡಿಂಗ್ ಇರುವಾಗ ಅಡ್ಡಿಪಡಿಸೋದು ಏಕೆ?. ಬೀದಿ ಬದಿಯಲ್ಲಿ ವ್ಯಾಪಾರ ಮಾಡಬೇಡ ಅಂದ್ರೆ ಹೇಗೆ?. ಈ ರೀತಿಯ ವ್ಯಾಪಾರ ನಿರ್ಬಂಧಕ್ಕೆ ಅವಕಾಶ ನೀಡಬಾರದು, ವ್ಯಾಪಾರಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ
ಸರ್ಕಾರದ ಪರವಾಗಿ ಉತ್ತರಿಸಿದ ಮಾಧುಸ್ವಾಮಿ, ಧಾರ್ಮಿಕ ಸೌಹಾರ್ದತೆ, ಶಾಂತಿಯನ್ನು ಯಾವುದೇ ಸಮುದಾಯದವರು ಭಂಗ ಮಾಡಿದ್ರೆ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ಆದರೆ 2002ರ ಕಾಯ್ದೆಯಲ್ಲಿ ಧಾರ್ಮಿಕ ಸಂಸ್ಥೆಯ ಸಮೀಪದ ಜಮೀನು, ಕಟ್ಟಡವೂ ಸೇರಿದಂತೆ ಯಾವುದೇ ಆಸ್ತಿಯಲ್ಲಿ ಹಿಂದೂಗಳಲ್ಲದವರಿಗೆ ಗುತ್ತಿಗೆ ಕೊಡಬಾರದು ಎಂಬ ನಿಯಮ ಮಾಡಿದ್ದಾರೆ. ಅದೇ ನಿಯಮವನ್ನು ಇಟ್ಟುಕೊಂಡು ಜಾತ್ರೆಗಳಲ್ಲಿ ನಿಯಮಗಳನ್ನು ಮಾಡಿದ್ದಾರೆ, ಅದನ್ನು ಇಟ್ಟುಕೊಂಡು ಬ್ಯಾನರ್ ಹಾಕಿದ್ದಾರೆ ಎಂದು ನಮ್ಮ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಮಾಡಿರೋದು, ಇದು ನಾವು ಮಾಡಿರೋದಲ್ಲ. ಧಾರ್ಮಿಕ ಸಂಸ್ಥೆಗಳಿಗೆ ಹೊಂದಿಕೊಂಡಂತಿರುವ ಆಸ್ತಿಗಳಲ್ಲಿ ಅವಕಾಶ ಇಲ್ಲ, ನಿಯಮ ಪಾಲಿಸಬೇಕು, ಅದನ್ನು ಅವರು ಒಪ್ಪಿಕೊಂಡು ನಡೆಯಬೇಕು. ಆದ್ರೆ ದೇವಸ್ಥಾನದ ಆಸ್ತಿ ಹೊರಗೆ ವ್ಯಾಪಾರಕ್ಕೆ ತಡೆ ಇದ್ದರೆ ಆದರ ಬಗ್ಗೆ ಗಮನಹರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಗೋವು ಹಂತಕರು, ಹಲಾಲ್ ವ್ಯಾಪಾರಿಗಳಿಗೆ ಹಿಂದೂ ಶ್ರದ್ಧಾ ಕೇಂದ್ರದಲ್ಲಿ ಏನು ಕೆಲಸ: ಭಜರಂಗದಳ ಪ್ರಶ್ನೆ
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾನೂನು ಒಂದು ಕಡೆ ಸರಿ. ಆದ್ರೆ ಇನ್ನೊಂದು ಕಡೆ ಜಾತ್ರೆ ವೇಳೆ ಸಮಿತಿ ಅವರು ಲೀಸ್ ಕೊಡ್ತಾರೆ. ಯಾರು ಲೀಸ್ ತಗೊಂಡಿದ್ದಾರೆ ಅವರು ಸಬ್ ಲೀಸ್ ಕೊಡ್ತಾರೆ, ಅದು ಅವರ ನಿರ್ಣಯ. ಅದರಿಂದ ಆದಾಯ ಕೂಡ ಅವರಿಗೆ ಬರುತ್ತೆ. ಆದ್ರೆ ಕಾನೂನು ಏನ್ ಇದೆ, ಅಲ್ಲಿ ಏನ್ ನಡೆದಿದೆ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.