ದಕ್ಷಿಣದಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ಇದೀಗ ಬಾಲಿವುಡ್ ನಲ್ಲಿ ಮತ್ತೊಂದು ಅವಕಾಶ ಪಡೆದಿದ್ದಾರೆ. ಕರಣ್ ಜೋಹಾರ್ (Karan Johar) ನಿರ್ಮಾಣದಲ್ಲಿ ಮೂಡಿ ಬರಲಿರುವ ಹೊಸ ಚಿತ್ರಕ್ಕೆ ಜಾನ್ವಿ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಶಶಾಂಕ್ ಖೈತಾನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.
ಈ ನಡುವೆ ಜಾನ್ವಿ ಕಪೂರ್ ಬಾಲಿವುಡ್ ಗಿಂತಲೂ ದಕ್ಷಿಣದಲ್ಲೇ ನೆಲೆಯೂರುವ ಎಲ್ಲ ಲಕ್ಷಣಗಳು ತೋರುತ್ತಿವೆ. ಈಗಾಗಲೇ ತೆಲುಗಿನಲ್ಲಿ ಅವರು ಜ್ಯೂನಿಯರ್ ಎನ್.ಟಿ.ಆರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದೀಗ ತೆಲುಗಿನ ರಾಮ್ ಚರಣ್ ನಟನೆಯ ಹೊಸ ಸಿನಿಮಾಗೂ ಜಾನ್ವಿ ಕಪೂರ್ (Janhvi Kapoor) ನಾಯಕಿ ಎಂದು ಹೇಳಲಾಗುತ್ತಿದೆ.
ಅಷ್ಟೇ ಅಲ್ಲದೇ, ಸ್ಯಾಂಡಲ್ ವುಡ್ ಖ್ಯಾತ ನಟ ಶಿವರಾಜ್ ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.
ಈಗಾಗಲೇ ಎರಡು ತಮಿಳು ಸಿನಿಮಾದಲ್ಲಿ ನಟಿಸಿರುವ ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ (Shivaraj Kumar), ಇದೀಗ ತೆಲುಗು (Telugu) ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು.
ತೆಲುಗಿನ ಹೆಸರಾಂತ ನಟ ರಾಮ್ ಚರಣ್ ನಟನೆಯ ಹೊಸ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಸ್ವತಃ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.
ರಾಮ್ ಚರಣ್ (Ram Charan) ಜೊತೆಗಿನ ಸಿನಿಮಾ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ‘ತೆಲುಗಿನಲ್ಲಿ ಆಫರ್ ಬಂದಿದ್ದು ನಿಜ. ರಾಮ್ ಚರಣ್ ಅವರ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಬುಚ್ಚಿ ಬಾಬು ನನ್ನನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಆ ಸಿನಿಮಾ ಬಗ್ಗೆ ಸದ್ಯ ಏನೂ ಹೇಳಲಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.