– ತಂದೆ ಜೊತೆ ಸೇರಿ ಪತ್ನಿಯನ್ನೇ ಕೊಂದ ಪತಿ
– ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿ ಸಾವು
ಕಲಬುರಗಿ: ವರದಕ್ಷಿಣೆ ತರಲಿಲ್ಲವೆಂದು ತಂದೆ ಜೊತೆ ಸೇರಿ ಪತಿಯೊಬ್ಬ ಪತ್ನಿಗೆ ಬೆಂಕಿ ಹಚ್ಚಿದ ಘಟನೆ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಕಿ ಹೊತ್ತಿಕೊಂಡು ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಪತ್ನಿ ಈಶ್ವರಿಯನ್ನು(30) ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಈಶ್ವರಿ ಅದೇ ಗ್ರಾಮದ ಸುರೇಶ ಕಡ್ಲಿ ಎಂಬವನ ಜೊತೆಗೆ ಮದುವೆ ಆಗಿದ್ದರು. ಆದರೆ ಮದುವೆಯಾದ ಕೆಲ ತಿಂಗಳ ಬಳಿಕ ನಿನಗೆ ಮಕ್ಕಳಾಗಿಲ್ಲ, ಹೀಗಾಗಿ ನೀನು ಮತ್ತಷ್ಟು ವರದಕ್ಷಿಣೆ ತರುಬೇಕೆಂದು ಸುರೇಶ್ ಪಟ್ಟು ಹಿಡಿದಿದ್ದ.
ಪತಿ ಹಾಗೂ ಮಾವ ಚಂದ್ರಶೇಖರ್ ಇಬ್ಬರು ಸೇರಿ ಗುರುವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿ ಈಶ್ವರಿ ಆಸ್ಪತ್ರೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಮನೆಯಲ್ಲಿ ಯಾರು ಇಲ್ಲದಿರುವಾಗ ಈಶ್ವರಿ ಬೆಂಕಿ ಹಚ್ಚಿಕೊಂಡು, ಮನೆಯಿಂದ ಹೊರ ಬಂದಿದ್ದಾಳೆ. ತಕ್ಷಣವೇ ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಇತ್ತ ಮನೆಗೂ ಬೆಂಕಿ ಹೊತ್ತಿಕೊಂಡು ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಚಿತ್ತಾಪುರ ಠಾಣಾ ಪೊಲೀಸರು ಈಶ್ವರಿ ಸಾಯುವುದಕ್ಕೂ ಮುನ್ನ ಹೇಳಿಕೆ ಪಡೆದಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆಯಷ್ಟೇ ಕಲಬುರಗಿಯ ಅಂಬಿಕಾ ನಗರದಲ್ಲಿ ವರದಕ್ಷಿಣೆ ಕಾಟಕ್ಕೆ ಬೇಸತ್ತು ಗೃಹಿಣಿ ಮೀನಾಕ್ಷಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv