– ಕಲಬುರಗಿಯಲ್ಲಿ ಬರ ವೀಕ್ಷಣೆ; ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯ
ಕಲಬುರಗಿ: ವಿಧಾನಸಭೆಯ ವಿಪಕ್ಷ ನಾಯಕನಾಗಿ ಆರ್.ಅಶೋಕ್ (R.Ashok) ಆಯ್ಕೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಬರ ಅಧ್ಯಯನಕ್ಕೆ (Drought Study) ಪ್ರವಾಸ ಕೈಗೊಂಡಿದ್ದಾರೆ. ಇಂದು (ಮಂಗಳವಾರ) ಕಲಬುರಗಿ ಜಿಲ್ಲೆಗೆ ಪ್ರವಾಸ ಮಾಡಿ ಬರ ಅಧ್ಯಯನ ಮಾಡಿದರು.
ಬೆಳಗ್ಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶ್ರೀನಿವಾಸ ಸರಡಗಿಯಲ್ಲಿ ಬರ ವೀಕ್ಷಣೆಗಾಗಿ ರೈತರ ಹೊಲಗಳಿಗೆ ಅಶೋಕ್ ಭೇಟಿ ನೀಡಿದರು. ಮಧ್ಯಾಹ್ನ ಆಳಂದ ತಾಲೂಕಿನ ಕಡಗಂಚಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು. ನಂತರ ಬರ ಪರಿಸ್ಥಿತಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದರು. ಇದನ್ನೂ ಓದಿ: ವಿಜಯೇಂದ್ರ ಪಾಪ ಇನ್ನೂ ಮಗು: ಚಲುವರಾಯಸ್ವಾಮಿ
ಸುರೇಶ್ ರಾಠೋಡ್ ಎಂಬವರ ಜಮೀನನಲ್ಲಿ ತೊಗರಿ ಬೆಳೆ ವೀಕ್ಷಿಸಿದರು. ಬೆಳೆ ಹಾನಿ ಕುರಿತು ರೈತರಿಂದ ಮಾಹಿತಿ ಪಡೆದರು. ಅನಾವೃಷ್ಟಿಯಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿತ್ತು. ಕಲಬುರಗಿ ಜಿಲ್ಲೆಯಾದ್ಯಂತ 8.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, 2.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ನಾಶವಾಗಿದೆ. ಆರ್.ಅಶೋಕ್ ಅವರಿಗೆ ಶಾಸಕ ಬಸವರಾಜ್ ಮತ್ತಿಮೂಢ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು.
ಬೆಳೆ ಹಾನಿ ಕುರಿತು ಮಾತನಾಡಿದ ಅಶೋಕ್, ಕಲಬುರಗಿ ಜಿಲ್ಲೆಯ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಹೀಗಾಗಿ ಬೆಳೆ ಪರಿಹಾರಕ್ಕೆ ಆಗ್ರಹಿಸಿದರೂ ಒಂದು ರೂಪಾಯಿ ಸರ್ಕಾರ ನೀಡಿಲ್ಲ. ಕಳೆದ ಬಾರಿ ಪ್ರವಾಹ ಬಂದಾಗ 180 ಕೋಟಿ ರೂ. ಹಣ ನೀಡಿದ್ದೇವೆ. ನಾವು ಕೇಂದ್ರ ಸರ್ಕಾರ ನೋಡಿಕೊಂಡ ಕೂರಲಿಲ್ಲ. ಸದ್ಯ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಪರಿಹಾರ ನೀಡುತ್ತಿಲ್ಲ. ರೈತರಿಗೆ ನೀಡಿದ ಪರಿಹಾರದಲ್ಲಿ ಹಣವೇ ನಮೂದು ಮಾಡಿಲ್ಲ. ಈ ಬಗ್ಗೆ ನಿಖರತೆ ಇಲ್ಲ. ಹೀಗಾಗಿ ಅಧಿಕಾರಿಗಳಿಗೆ ನಾಟಕ ಆಟಬೇಡಿ ಅಂತಾ ಹೇಳಿದ್ದೇನೆ. ಇಲ್ಲಿನ ರೈತರಿಗೆ ನ್ಯಾಯ ಸಿಗಬೇಕು. ರೈತರ ಸಾಲ ಮನ್ನಾ ಸಹ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದನ್ನೂ ಓದಿ: ಮೋದಿ ಸರ್ಕಾರ ಕೊಟ್ಟ ಅನುದಾನದಲ್ಲಿ ರಾಜ್ಯದಲ್ಲಿ ಕೆಲಸ ಆಗ್ತಿದೆ: ಕಟೀಲ್
ಬೆಳಗಾವಿ ಅಧಿವೇಶನದಲ್ಲಿ ಇದೇ ವಿಷಯ ನಿಲುವಳಿ ಮಾಡಿ ಚರ್ಚೆ ಮಾಡುತ್ತೇವೆ. ಆದರೆ ಸರ್ಕಾರ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ. ರೈತರಿಗೆ ಸರಿಯಾಗಿ ಕರೆಂಟ್ ಕೊಟ್ಟಿಲ್ಲ. ಈಗ ಬೆಳೆ ಹಾನಿ ಆದ ಮೇಲೆ ಕರೆಂಟ್ ಕೊಡಲು ಮುಂದಾಗಿದ್ದಾರೆ. ಮೋದಿ ಅವರು ಕಿಸಾನ್ ಯೋಜನೆಯಡಿ 6 ಸಾವಿರ ಮತ್ತು ರಾಜ್ಯದ ನಾಲ್ಕು ಸಾವಿರ ಸೇರಿಸಿ 10 ಸಾವಿರ ಕೊಡುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರ ಅದನ್ನು ನಿಲ್ಲಿಸಿದೆ. ರೈತರ ಮಕ್ಕಳ ಉನ್ನತ ಶಿಕ್ಷಣ, ವಿದ್ಯಾಭ್ಯಾಸಕ್ಕೆ ನೀಡುವ ಹಣ ನಿಲ್ಲಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಕೇಂದ್ರ ಸರ್ಕಾರ ಏನ ಕೊಡಬೇಕು ಅದು ಬರುತ್ತದೆ. ಮನಮೋಹನ್ ಸಿಂಗ್ ಅವರು ಮಾಡಿದ ನೀತಿ ಇದು. ಈ ಹಿಂದೆ ನಾಲ್ಕು ವರ್ಷ ನಾವೇ ಕೊಟ್ಟಿದ್ದೇವೆ. ಆದರೆ ಇವರು ಖಜಾನೆಯಲ್ಲಿ ಹಣ ಇಲ್ಲ. ಎಲ್ಲಾ ಫ್ರೀ ಫ್ರೀ ಅಂತಾ ಹೇಳಿ ಅದು ಸಹ ಕೊಡುತ್ತಿಲ್ಲ. ಹಿಂದಿನ ಸರ್ಕಾರದ ದಾಖಲೆ ನೋಡಿ ನಮ್ಮದು ತಪ್ಪು ಎಂದರೆ ಒಪ್ಪಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು. ಕಲಬುರಗಿ ಪ್ರವಾಸ ಮುಗಿಸಿ ನಂತರ ಬೀದರ್ಗೆ ಬರ ಅಧ್ಯಯನಕ್ಕೆ ಆರ್.ಅಶೋಕ್ ಪ್ರಯಾಣ ಬೆಳಸಲಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ಸಿಂಗ್ ಬೆಂಗಳೂರು ಕಂಬಳಕ್ಕೆ ಬರಲ್ಲ: ವಿವಾದಕ್ಕೆ ತೆರೆ ಎಳೆದ ಅಶೋಕ್ ರೈ