– ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಪಾಟ್ನಾ\ಕಲಬುರಗಿ: ಐಎನ್ಡಿಐಎ (I.N.D.I.A) ಒಕ್ಕೂಟದಿಂದ ಜೆಡಿಯು (JDU) ಹೊರಬರುವ ಸಾಧ್ಯತೆಗಳು ದಟ್ಟವಾಗಿದೆ.
ಬಿಹಾರದಲ್ಲಿ ಬಿಜೆಪಿ ಜೊತೆ ನಿತೀಶ್ ಕುಮಾರ್ (Nitish Kumar) ಸರ್ಕಾರ ರಚನೆ ಬಹುತೇಕ ಫಿಕ್ಸ್ ಆಗಿದ್ದು, ಭಾನುವಾರವೇ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಗಳಿವೆ. ಇಂದು ಸಂಜೆಯೇ ಬಿಜೆಪಿಯು ಮಹತ್ವದ ಸಭೆ ಕರೆದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೇ ಅವರು ಈಗಾಗಲೇ ಪಾಟ್ನಾ ತಲುಪಿದ್ದಾರೆ.
ಇನ್ನೊಂದೆಡೆ ಬಿಹಾರದಲ್ಲಿ (Bihar) ರಾಜಕೀಯ ಬಿಕ್ಕಟ್ಟು ಎದುರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವೀಕ್ಷಕರನ್ನ ನೇಮಕ ಮಾಡಿದೆ. ಭೂಪೇಶ್ ಬಘೇಲ್ ಅವರನ್ನು ವೀಕ್ಷಕನನ್ನಾಗಿ ನೇಮಸಿದೆ. ಮಗದೊಂದು ಕಡೆ ಜೆಡಿಯುನ 10 ಶಾಸಕರನ್ನು ಸೆಳೆಯಲು ಲಾಲೂ ಪ್ರಸಾದ್ ಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಐಎನ್ಡಿಐಎ ಒಕ್ಕೂಟದಿಂದ ಜೆಡಿಯೂ ಹೊರ ಹೋಗುವ ಮಾಹಿತಿ ಇಲ್ಲ. ನಾನು ಕೂಡ ಪತ್ರ ಬರೆದಿದ್ದೆನೆ ಅವರ ಮನಸ್ಸಿನಲ್ಲಿ ಏನಿದೆ ಗೊತ್ತಿಲ್ಲ. ಅವರ ರಾಜ್ಯಪಾಲರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ. ಊಹಾಪೋಹದ ಬಗ್ಗೆ ನಾನು ಮಾತನಾಡಲ್ಲ ಎಂದರು.
ನಮ್ಮ ಒಕ್ಕೂಟ ಮುರಿಬಾರದು ಅಂತಾ ಎಲ್ಲ ನಾಯಕರಿಗೂ ಹೇಳುತ್ತಾ ಬಂದಿದ್ದೇನೆ. ಒಂದು ಕಡೆ ಇದ್ರೆ ಮಾತ್ರ ಒಳ್ಳೆಯ ಫೈಟ್ ಕೊಟ್ಟು ಯಶಸ್ವಿಯಾಗುತ್ತದೆ. ಪ್ರಜಾಪ್ರಭುತ್ವ ಉಳಿಸಬೇಕು ಎಂಬವರು ಯಾರು ಸಹ ಆತುರದ ನಿರ್ಧಾರ ಮಾಡುವುದಿಲ್ಲ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.