– 3 ವರ್ಷದಿಂದ ನನಗೆ ಜೆಡಿಎಸ್ನಿಂದ ಅವಮಾನವಾಗಿದೆ ಅಂತ ಬೇಸರ
– ಸಾಯೋವರೆಗೆ ಈ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದ ಶಾಸಕ
ಮೈಸೂರು: ಕಳೆದ 3 ವರ್ಷಗಳಿಂದ ಜೆಡಿಎಸ್ನಿಂದ ನನಗೆ ಅವಮಾನವಾಗಿದೆ ಎಂದು ಶಾಸಕ ಜಿ.ಟಿ. ದೇವೇಗೌಡ (GT Devegowda) ಬೇಸರ ವ್ಯಕ್ತಪಡಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ (Chamundeshwari Constituency) ಜನರಿಂದ ಇಂದು ನಡೆದ ರಾಜಕೀಯ ಮೆರವಣಿಗೆ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವಿರುದ್ಧ ಅಬ್ಬರಿಸಿದ್ದಾರೆ.
ನಾನು ಜೆಡಿಎಸ್ (JDS) ಶಾಸಕ. ಆದರೆ ಜೆಡಿಎಸ್ನ ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆಯಲಿಲ್ಲ. ಯಾವುದೇ ಜೆಡಿಎಸ್ ಸಮಾವೇಶಕ್ಕೂ ಕರೆಯದೆ ನನ್ನಗೆ ಅವಮಾನ ಮಾಡಿದರು. ಈ ಅವಮಾನಕ್ಕೆ ಉತ್ತರಕ್ಕಾಗಿ ನಮ್ಮ ಜನ ಮೆರವಣಿಗೆ ಮಾಡುತ್ತಿದ್ದಾರೆ. ಇದು ನನ್ನ ಶಕ್ತಿ ಪ್ರದರ್ಶನವಲ್ಲ. ಇದು ಜನರು ನನಗೆ ಕೊಟ್ಟಿರುವ ಪ್ರೀತಿಯ ಸಂಕೇತ ಎಂದು ಬಣ್ಣಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯವಲ್ಲ, ಜಿ.ಟಿ ದೇವೇಗೌಡ ಮಾತ್ರ ಮುಖ್ಯ. ಪಕ್ಷ ಯಾವುದೇ ಇರಲಿ ಜನರಿಗೆ ಜಿ.ಟಿ ದೇವೇಗೌಡ ಮುಖ್ಯ. ನನ್ನನ್ನ ಏಕಾಂಗಿಯಾಗಲು ಕ್ಷೇತ್ರದ ಜನರು ಬಿಡುವುದಿಲ್ಲ. ನಾನು ಸಾಯುವ ತನಕ ಏಕಾಂಗಿಯಾಗಿ ಈ ಜನರ ಸೇವೆ ಮಾಡುತ್ತೇನೆ. ನಾನು ಹಿಂದೆ ಬಿಜೆಪಿಗೆ ಹೋಗಿದ್ದಾಗ ಜನರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ತಂದರು. ಇಲ್ಲಿನ ಜನರಿಗೆ ಜಿ.ಟಿ ದೇವೇಗೌಡ ಮುಖ್ಯ. ಮುಂದಿನ ಚುನಾವಣೆಗೆ ಜನರನ್ನ ಕರೆದು ಅವರು ಹೇಳಿದಂತೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ಹೆಚ್ಡಿಕೆ ಹೇಳಿಕೆಗೆ ಕೌಂಟರ್
ಮುಂದುವರಿದು ಮಾತನಾಡಿದ ಜಿಟಿಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಅಂತ ಜನ ನೋಡಲ್ಲ. ಅವರು ನನ್ನ ಮುಖ ನೋಡುತ್ತಾರೆ ಎಂದು ಹೆಚ್ಡಿಕೆ ಹೇಳಿಕೆಗೆ ಕೌಂಟರ್ ಕೊಟ್ಟಿದ್ದಾರೆ.
ನಾನು ಹಿಂದೆ ಬಿಜೆಪಿಗೆ ಹೋದಾಗ ಚಾಮುಂಡೇಶ್ವರಿಯಲ್ಲಿ ಬಿಜೆಪಿ-ಜೆಡಿಎಸ್ 3ನೇ ಸ್ಥಾನಕ್ಕೆ ಬಂದಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯವಲ್ಲ. ಅಲ್ಲಿ ಜಿ.ಟಿ. ದೇವೇಗೌಡ ಮಾತ್ರ ಮುಖ್ಯ. ನನ್ನ ವಿರುದ್ಧ ಎಂಥಂತವರು ನಿಂತರೂ ನನ್ನ ಕೈ ಬಿಟ್ಟಿಲ್ಲ ಎಂದು ಹೇಳಿದ್ದಾರೆ.
