ಮಂಡ್ಯ: ಜಿಲ್ಲೆಯಲ್ಲಿ ಇದೀಗ ಕಣ್ಣೀರಿನ ಪಾಲಿಟಿಕ್ಸ್ ಆರಂಭವಾಗಿದೆ. ಮಂಡ್ಯ ಲೋಕಸಭಾ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಎಲ್ಆರ್.ಶಿವರಾಮೇಗೌಡ ಅವರು ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.
ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 25 ವರ್ಷಗಳ ಹಿಂದೆ ನಡೆದ ಪತ್ರಕರ್ತನ ಗಂಗಾಧರ ಮೂರ್ತಿ ಕೊಲೆ ಪ್ರಕರಣ ನೆನೆದು ಕಣ್ಣೀರು ಹಾಕಿದ್ದಾರೆ. ಪತ್ರಕರ್ತನ ಕೊಲೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಬಂದಿತ್ತು. ಆರೋಪ ಕೇಳಿ ಬಂದ ಬಳಿಕ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ದೇವರೇ ನನಗೂ ಅದಕ್ಕೂ ಸಂಬಂಧವಿಲ್ಲ. ಈ ಬಗ್ಗೆ ನಿಮಗೆ ಗೊತ್ತು. ಬೇರೆಯವರಿಗೆ ಗೊತ್ತಿಲ್ಲ. ಆದರೆ ನಾನು ನಿರಪರಾಧಿ ಎಂಬುದು ಆನಂತರ ಸಾಬೀತಾಯ್ತು. ಆದರೂ ಕೂಡ ಈಗ ಚುನಾವಣೆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಲೇ ಸೇರಿದ್ದ ಜನರ ಮುಂದೆ ಅತ್ತುಬಿಟ್ಟರು.
ಇಂದು ಕುಮಾರಸ್ವಾಮಿ ಅವರು ಶಿವರಾಮೇ ಗೌಡ ಅವರಿಗೆ ಅಧಿಕಾರವಿಲ್ಲ, ಅವರಿಗೆ ಅಧಿಕಾರಿ ಕೊಡಿಸಬೇಕು ಅಂತ ಆಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿಕೊಡೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಯಾವತ್ತೂ ಯಾರ ಜೇಬಿಗೂ ಕೈ ಹಾಕಿಲ್ಲ. ಯಾರಿಗೂ ತೊಂದರೆ ಕೊಟ್ಟಿಲ್ಲ ಅಂತ ಅವರು ತಿಳಿಸಿದ್ರು.
ಕುಡುಕನಲ್ಲಿ ಮನವಿ:
ಶಿವರಾಮೇಗೌಡರು ಮಾತನಾಡುವಾಗ ಕುಡುಕನೊಬ್ಬ ಪದೇ ಪದೇ ಮಧ್ಯೆ ಮಾತನಾಡುತ್ತಿದ್ದನು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಎಲ್ಆರ್.ಶಿವರಾಮೇಗೌಡರು ಕುಡುಕನಲ್ಲಿ, ನಿನ್ನ ದಮ್ಮಯ್ಯ ಕಣೋ ಕಾಲಿಗೆ ಬೀಳುತ್ತೇನೆ ಕುಳಿತುಕೋ.. ಅಂತ ಜೋರಾಗಿ ಗದರಲಾಗದೇ ಸುಮ್ಮನಿರುವಂತೆ ಬೇಡಿಕೊಂಡ ಪ್ರಸಂಗ ನಡೆಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv