ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೊದಲು ಅವರ ಪಕ್ಷದಿಂದ ವಿರೋಧ ಪಕ್ಷದ ನಾಯಕರೆಂದು ಘೋಷಣೆ ಮಾಡಿಸಿಕೊಳ್ಳಲಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಿದ್ದುಗೆ ಸವಾಲು ಎಸೆದಿದ್ದಾರೆ.
ನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಜಗದೀಶ್ ಶೆಟ್ಟರ್, ಎಸಿಬಿ, ಲೋಕಾಯುಕ್ತದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲದಾಗಿದೆ. ನೈತಿಕತೆಯನ್ನ ಮರೆತು ಸಿದ್ದರಾಮಯ್ಯ ಎಸಿಬಿ ಸ್ಥಾಪನೆ ಮಾಡಿದರು. ಅವರಿಗೆ ನೈತಿಕತೆ ಇದ್ದಿದ್ದರೆ ಅವರು ಸಿಎಂ ಆಗಿದ್ದ ವೇಳೆಯೇ ಎಸಿಬಿ ರದ್ದುಗೊಳಿಸಿ. ಲೋಕಾಯುಕ್ತಕ್ಕೆ ಬಲ ತುಂಬಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಎಸಿಬಿ, ಲೋಕಾಯುಕ್ತದ ಬಗ್ಗೆ ಸಿದ್ದರಾಮಯ್ಯ ಅವರು ಸದನದಲ್ಲಿ ಮಾತನಾಡಲಿ. ಆಗ ಉತ್ತರ ನೀಡುತ್ತೇವೆ. ಮೊದಲು ಸಿದ್ದರಾಮಯ್ಯ ವಿಪಕ್ಷ ನಾಯಕರು ಎಂದು ಘೋಷಣೆ ಮಾಡಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು. ಅಲ್ಲದೇ ವಿಪಕ್ಷ ನಾಯಕರೆಂದು ಘೋಷಣೆ ಮಾಡಿಸಿಕೊಂಡ ನಂತರ ಅವರು ಬಿಜೆಪಿ, ಸಿಎಂ ಯಡಿಯೂರಪ್ಪ ಮತ್ತು ಪ್ರಧಾನ ಮಂತ್ರಿ ಮೋದಿ ಬಗ್ಗೆ ಮಾತನಾಡಲಿ ಎಂದು ಸವಾಲು ಎಸೆದರು.