ಮಡಿಕೇರಿ: ಉತ್ತರಪ್ರದೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಹಣೆಯ ಭಾಗಕ್ಕೆ ಹಸಿರು ಬಣ್ಣದ ಲೇಸರ್ ಲೈಟ್ ಬಿದ್ದಿದ್ದಕ್ಕೆ ಕೇಂದ್ರ ಎಸ್ಜಿಪಿಯಲ್ಲಿ ಹಸ್ತಕ್ಷೇಪ ಮಾಡ್ತಿರೋದು ಕಾರಣ ಎಂದು ಶಾಂತಿನಗರ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹ್ಯಾರೀಸ್ ಗಂಭೀರ ಆರೋಪ ಮಾಡಿದ್ದಾರೆ.
ಮಡಿಕೇರಿಯಲ್ಲಿ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭ ಮಾತನಾಡಿದ ಅವರು, ಚಿಕ್ಕಂದಿನಿಂದ ಸೆಕ್ಯೂರಿಟಿಯಲ್ಲೇ ಬೆಳೆದ ರಾಹುಲ್ ಗಾಂಧಿಯವರ ಸೆಕ್ಯೂರಿಟಿಯ ಬಗ್ಗೆ ಮೋದಿ ಸರ್ಕಾರ ಗಮನ ಹರಿಸುತ್ತಿಲ್ಲ. ಆಗಾಗ ಅವರ ಸೆಕ್ಯೂರಿಟಿ ಕಡಿಮೆ ಮಾಡುತ್ತಿದೆ. ಇದೆಲ್ಲದ್ದರಿಂದಲೇ ಇಂತಹ ಘಟನೆ ನಡೆದಿದೆ ಎಂದರು.
ಐಟಿ, ಈಡಿ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ಮೋದಿ ಸರ್ಕಾರ ಈ ವಿಚಾರದಲ್ಲೂ ಹಾಗೆ ಮಾಡಿದೆ. ಮೋದಿ ಸರ್ಕಾರಕ್ಕೆ ಸೋಲುವ ಭಯ ಕಾಡುತ್ತಿದ್ದು ಅವರು ಈಗ ಏನು ಮಾಡೋದಕ್ಕೂ ರೆಡಿಯಾಗಿದ್ದಾರೆ ಎಂದು ಹ್ಯಾರೀಸ್ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 7 ಬಾರಿ ತಲೆ ಮೇಲೆ ಲೇಸರ್ ಲೈಟ್ – ಅಮೇಥಿ ರ್ಯಾಲಿ ವೇಳೆ ರಾಹುಲ್ ಹತ್ಯೆಗೆ ಸಂಚು?
ಪ್ರಕಾಶ್ ರೈ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯಾರೀಸ್, ಪ್ರಕಾಶ್ ರೈ ನಮ್ಮ ಆತ್ಮೀಯ ಸ್ನೇಹಿತರು, ಅವರಿಗೆ ಸ್ಪರ್ಧೆ ಮಾಡದಂತೆ ಮನವಿ ಮಾಡಿದ್ದೆವು. ಆದರೆ ಅವರು ತಮ್ಮ ನಿಲುವನ್ನು ಬದಲಿಸಲು ತಯಾರಿಲ್ಲ ಎಂದು ಹೇಳಿದರು.
ಶಾಂತಿನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಖುಷ್ಬೂ ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದರ ಬಗ್ಗೆ ಮಾತನಾಡಿದ ಹ್ಯಾರೀಸ್, ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ವೈಯಕ್ತಿಕವಾಗಿ ಏನಾದ್ರೂ ಹರ್ಟ್ ಆದಾಗ ಕೆಲವರು ಹೀಗೆ ರಿಯಾಕ್ಟ್ ಮಾಡ್ತಾರೆ ಎಂದರು.