ನೆಲಮಂಗಲ: ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಉದ್ಯಮಿ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸ್ವಾತಿ ಲಾಡ್ಜಿಂಗ್ ಅಂಡ್ ಬೋರ್ಡಿಂಗ್ ನಲ್ಲಿ ನಡೆದಿದೆ.
ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಉದ್ಯಮಿ ಪ್ರದೀಪ್ ಸಿಂಗ್ ಶೇಖಾವತ್(38) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿ. ಕಳೆದ ಸಂಜೆ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿಕೊಂಡು ಲಾಡ್ಜ್ನ ಮೂರನೇ ಮಹಡಿಯ ಕೊಠಡಿ ಸಂಖ್ಯೆ 104 ರಲ್ಲಿ ತಂಗಿದ್ದ ಪ್ರದೀಪ್ ಸಿಂಗ್, ಬೆಳಗ್ಗೆ 9 ಗಂಟೆಯಾದರೂ ರೂಂ ನಿಂದ ಹೊರಬಾರದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ನೆಲಮಂಗಲ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ನೆಲಮಂಗಲ ಪೊಲೀಸರು ಬಾಗಿಲು ಹೊಡೆದು ಒಳಹೋದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈಸೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್
ಉಸಿರುಗಟ್ಟಿ ಹಾಗೂ ವಿಷಸೇವನೆ ಮಾಡಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಪ್ರದೀಪ್ ಸಿಂಗ್ ಶೇಖಾವತ್ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲು ಮಾಡಿದ್ದು ಪೊಲೀಸರು ಹುಡುಕಾಟದಲ್ಲಿದ್ದರು. ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ನೆಲಮಂಗಲ ನಗರ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು