– ಪರೀಕ್ಷೆಯಲ್ಲಿ ರ್ಯಾಂಕ್ ಬರ್ತಿದ್ದಂತೆ ವರಸೆ ಬದಲಾಯಿಸಿದ
ಹೈದರಾಬಾದ್: ಪತ್ನಿಗೆ ಕಿರುಕುಳ ಹಾಗೂ ಬೆದರಿಕೆ ಒಡ್ಡಿದ್ದಕ್ಕಾಗಿ ತರಬೇತಿ ನಿರತ ಐಪಿಎಸ್ ಅಧಿಕಾರಿಯನ್ನು ಗೃಹ ಇಲಾಖೆ ಅಮಾನತು ಮಾಡಿದೆ.
ಐಪಿಎಸ್ ಅಧಿಕಾರಿ ಕೊಕ್ಕಂತಿ ಮಹೇಶ್ವರ ರೆಡ್ಡಿ ಅವರನ್ನು ಕೇಂದ್ರ ಗೃಹ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು, ವಿಚ್ಛೇದನ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಿನ್ನೆಲೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಅಪರಾಧ ಪ್ರಕರಣ ದಾಖಲಾಗಿರುವ ಹಿನ್ನೆಲೆ, ತನಿಖೆ ನಡೆಯುತ್ತಿದೆ. ಹೀಗಾಗಿ 28 ವರ್ಷದ ಅಧಿಕಾರಿಯ ನೇಮಕಾತಿಯನ್ನು ಅಮಾನತಿನಲ್ಲಿಡಲಾಗಿದೆ. ಪತ್ನಿ ಬಿರುದುಲ ಭಾವನಾ(28) ಅವರು ಹೈದರಾಬಾದಿನ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದು, ಬೇರೆ ಮಹಿಳೆಯನ್ನು ಮದುವೆಯಾಗಲು ವಿಚ್ಛೇದನ ನೀಡುವಂತೆ ಮಹೇಶ್ವರ ರೆಡ್ಡಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾವನಾ, ಈ ಕುರಿತು ಜವಾಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಗೆ ಕಿರುಕುಳ ನೀಡಿದ ಆಧಾರದ ಮೇಲೆ ಐಪಿಎಸ್ ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಎಸ್ಸಿ, ಎಸ್ಟಿ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ.
2009ರಿಂದ ಕಾಲೇಜು ದಿನಗಳಿಂದಲೂ ನಾವಿಬ್ಬರು ಜೊತೆಯಾಗಿದ್ದೆವು, ನಂತರ ಇಬ್ಬರೂ ಮದುವೆಯಾದೆವು ಎಂದು ಭಾವನಾ ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಕಡಪ ಜಿಲ್ಲೆಯವರಾದ ಕೊಕ್ಕಂತಿ ಮಹೇಶ್ವರ ರೆಡ್ಡಿ ಪ್ರಸಕ್ತ ಸಾಲಿನಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ 126ನೇ ರ್ಯಾಂಕ್ ಪಡೆದಿದ್ದು, ಪ್ರಸ್ತುತ ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಅಕಾಡೆಮಿಯಲ್ಲಿ ಪ್ರಾಥಮಿಕ ತರಬೇತಿ ಪಡೆಯುತ್ತಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಬರುತ್ತಿದ್ದಂತೆ ಬೇರೆ ಮಹಿಳೆಯನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ಹೀಗಾಗಿ ವಿಚ್ಛೇದನ ನೀಡುವಂತೆ ನನಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಈ ಕುರಿತು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಭಾವನಾ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ಮಾಹಿತಿ ನೀಡಿ, ಎಫ್ಐಆರ್ ದಾಖಲಿಸುವುದಕ್ಕೂ ಮುನ್ನ ನಾವು ಇಬ್ಬರನ್ನೂ ಕರೆದು ವಿಚಾರಣೆ ನಡೆಸಿ, ಸಂಧಾನ ಮಾಡಲು ಯತ್ನಿಸಿದೆವು. ಆದರೆ ಅದು ಫಲಕಾರಿಯಾಗಲಿಲ್ಲ ಎಂದು ತಿಳಿಸಿದ್ದಾರೆ.