ಮೊಹಾಲಿ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಆಯ್ಕೆಗಾರರು ಐಪಿಎಲ್ 11 ನೇ ಆವೃತ್ತಿಗೆ ತನ್ನನ್ನು ಉಳಿಸಿಕೊಳ್ಳುವ ಬಗ್ಗೆ ಮೊದಲು ಮಾಹಿತಿ ನೀಡಿದ್ದರು. ಆದ್ರೆ ಬಳಿಕ ಅವರು ತನ್ನನ್ನು ಸಂಪರ್ಕಿಸಲಿಲ್ಲ. ಇದರಿಂದ ತನಗೆ ನಿರಾಸೆ ಅನುಭವ ಉಂಟಾಗಿತ್ತು ಎಂದು ಕಿಂಗ್ಸ್ ಇಲೆವೆನ್ ತಂಡ ಹಾಗೂ ಕೆರೆಬಿಯನ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹೇಳಿದ್ದಾರೆ.
ಈ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಮೊದಲು ಆರ್ಸಿಬಿ ತಂಡದ ಆಯ್ಕೆ ಸಮಿತಿ ತನ್ನನ್ನು ಉಳಿಸಿಕೊಳ್ಳುವುದಾಗಿ ಮಾಹಿತಿ ನೀಡಿತ್ತು. ಆದರೆ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಆದರೆ ಈ ಕುರಿತು ಯಾರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ತಾನು ಈ ಹಿಂದಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ಇದಕ್ಕೆ ಸಾಕ್ಷಿ ಎಂಬಂತೆ 21 ಶತಕ ಹಾಗೂ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದೇನೆ ಎಂದರು.
ಸೆಹ್ವಾಗ್ ಅಚ್ಚರಿ ಆಯ್ಕೆ: ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ವೇಳೆ ತನ್ನನ್ನು ಎರಡು ಬಾರಿಯೂ ಆಯ್ಕೆ ಮಾಡಿರಲಿಲ್ಲ. ಆದರೆ ಮೂರನೇ ಬಾರಿ ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಅವಕಾಶ ನೀಡಿದ್ದರು. ಇದು ತನಗೆ ಅಚ್ಚರಿ ಮೂಡಿಸಿತ್ತು. ಈ ಮೊದಲು ತಾನು ಟೂರ್ನಿಗೆ ಅಗತ್ಯವಿಲ್ಲ `ಇಟ್ಸ್ ಫೈನ್’ ಎಂದು ಸಮಾಧಾನಗೊಂಡಿದ್ದೆ ಎಂದು ಹೇಳಿದರು.
ಕಪ್ ಗೆಲ್ಲಬೇಕು: ಈ ಬಾರಿಯ ಟೂರ್ನಿಯಲ್ಲಿ ತಾನು ಕೇವಲ ಒಂದು ಉದ್ದೇಶ ಹೊಂದಿದ್ದೇನೆ. ಅದು ಪಂಜಾಬ್ ಕಪ್ ಗೆಲ್ಲುವಂತೆ ಮಾಡುವುದು. ತಂಡದ ಮಾಲೀಕರಾದ ಪ್ರೀತಿ ಜಿಂಟಾ ಅವರಿಗೆ ಕಪ್ ಗೆದ್ದು ನೀಡುತ್ತೇವೆ. ಇದಾದ ಬಳಿಕ 2019 ರ ವಿಶ್ವಕಪ್ ಅನ್ನು ತನ್ನ ದೇಶಕ್ಕೆ ಗೆಲ್ಲಿಸಿಕೊಡ ಬೇಕಿದೆ. ಆದ್ರೆ ವಿಶ್ವಕಪ್ ಗೆ ಆಯ್ಕೆಯಾಗಲು ಸಾಕಷ್ಟು ಹೋರಾಟ ನಡೆಸಬೇಕಾಯಿತು ಎಂದು ಹೇಳಿದರು.
ಕಳೆದ 10 ಐಪಿಎಲ್ ಟೂರ್ನಿಗಳಲ್ಲಿ ಗೇಲ್ 6 ಶತಕಗಳನ್ನು ಒಳಗೊಂಡಂತೆ 3,878 ರನ್ ಗಳಿಸಿದ್ದಾರೆ. 11 ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿರುವ ಗೇಲ್ ಈಗಾಗಲೇ ಹೈದರಾಬಾದ್ ವಿರುದ್ಧ ಸ್ಫೋಟಕ ಶತಕ (106 ರನ್) ಸಿಡಿಸಿದ್ದು, ಇದುವರೆಗೂ ಆಡಿರುವ ಪಂದ್ಯಗಳಲ್ಲಿ 161.53 ಸ್ಟ್ರೈಕ್ ರೇಟ್ ನಲ್ಲಿ 252 ರನ್ ಸಿಡಿಸಿದ್ದಾರೆ.