ಚಿಕ್ಕಬಳ್ಳಾಪುರ: ನಾನೇನು ಎಳೆ ಮಗುನಾ? ಹೇಳಿದವರ ಮಾತು ಕೇಳೋಕೆ? ನಾನು ಮೂರು ಬಾರಿ ಗೆದ್ದು ಶಾಸಕನಾದವನು, ವೈದ್ಯನಾಗೀದ್ದೀನಿ, ನಾನು ಪ್ರಪಂಚವನ್ನ ನೋಡಿದ್ದೀನಿ. ಯಾರು ಹೇಳಿಕೋಡೋದು ಏನೂ ಇಲ್ಲ ಅಂತ ಚಿಕ್ಕಬಳ್ಳಾಪುರದಲ್ಲಿ ಎಚ್. ವಿಶ್ವನಾಥ್ಗೆ ಶಾಸಕ ಸುಧಾಕರ್ ತಿರುಗೇಟು ನೀಡಿದ್ದಾರೆ.
ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಧಾಕರ್ ಅವರು, ವಿಶ್ವನಾಥ್ರವರ ಹಿತದೃಷ್ಟಿಯಿಂದಲೇ ನಾನು ಹೇಳಿದ್ದೇನೆ. ವಿಶ್ವನಾಥ್ ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವವರಲ್ಲಿ ನಾನು ಒಬ್ಬ. ಬಹಿರಂಗವಾಗಿ ಮಾಧ್ಯಮಗಳಲ್ಲಿ ಮಾತನಾಡುವುದರಿಂದ ಉಪಯೋಗ ಆಗಲ್ಲ. ಸೂಕ್ತವಾದ ವೇದಿಕೆಯಲ್ಲಿ ಯಾರಿಗೆ ಹೇಗೆ ಹೇಳಬೇಕೋ ಹಾಗೆ ಅರ್ಥೈಸಿ ಮಂಡಿಸೋಣ ಅಂತ ಹೇಳಿದ್ದೆ. ಆದರೆ ವಿಶ್ವನಾಥ್ ಅವರು ನನ್ನನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ಗೆ ಮಂತ್ರಿಗಿರಿ ಸಿಗದಿದ್ರೆ ಆಕಾಶವೇನು ಬೀಳಲ್ಲ: ಹೆಚ್.ವಿಶ್ವನಾಥ್
ವಿಶ್ವನಾಥ್ ಅವರ ಬಗ್ಗೆ ಗೌರವವಿದೆ. ಅವರ ನೋವು ನನಗೆ ಅರ್ಥ ಆಗುತ್ತದೆ. ವಿಶ್ವನಾಥ್ ಅವರ ನೋವಿನ ಜೊತೆ ನಾನು ಸಹ ಇರುತ್ತೇನೆ. ನಾನು ವಿಶ್ವನಾಥ್ರವರ ಜೊತೆಯಾಗಿ ನನ್ನ ಆತ್ಮೀಯ ಸ್ನೇಹಿತರಾದ ಎಂಟಿಬಿ ಜೊತೆ ಶಾಶ್ವತವಾಗಿ ಇರುತ್ತೇನೆ. ಸುಧಾಕರ್ ಅಧಿಕಾರಕ್ಕೆ ಅಂಟಿ ಕೂರುವ ಮನುಷ್ಯನಲ್ಲ. ಸ್ನೇಹ ಹಾಗೂ ವಿಶ್ವಾಸಕ್ಕೆ ಅವರಿಬ್ಬರ ಜೊತೆ ಜೀವನಪರ್ಯಂತ ಇರುತ್ತೇನೆ ಎಂದರು.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ನನಗೆ ಯಾವ ಖಾತೆಯಾದರೂ ಕೊಡಲಿ ಒಳ್ಳೆಯ ಕೆಲಸ ಮಾಡುವೆ. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ, ಯಡಿಯೂರಪ್ಪ ಕೈ ಬಲಪಡಿಸುವೆ. ಆದರೆ ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗಿ, ಮಂತ್ರಿ ಸ್ಥಾನ ಸಿಕ್ಕರೆ ಒಳ್ಳೆಯದಾಗುತ್ತೆ ಎಂದು ಹೇಳಿದರು.