ಬೆಂಗಳೂರು: ಒಂದು ಕಡೆ ಉಗ್ರರು, ಮತ್ತೊಂದು ಕಡೆ ಪಾಕಿಸ್ತಾನದ ಉಪಟಳ. ಮಗದೊಂದು ಕಡೆ ನಮ್ಮ ವಿಂಗ್ ಕಮಾಂಡ್ ಅಭಿನಂದನ್ ಬಿಡುಗಡೆಯ ಟೆನ್ಷನ್. ಇಷ್ಟೆಲ್ಲ ಇದ್ದರೂ ನಮ್ಮ ರಾಜಕಾರಣಿಗಳು ಮಾತ್ರ ರಾಜಕೀಯವನ್ನು ನಿಲ್ಲಿಸುತ್ತಿಲ್ಲ.
ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಸುರಕ್ಷಿತವಾಗಿ ಮರಳುವಂತೆ ದೇಶಕ್ಕೆ ದೇಶವೇ ಪ್ರಾರ್ಥಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ರಾಜಕಾರಣಿಗಳ ರಾಜಕೀಯ ಮುಂದುವರಿದಿದೆ. ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಖೇಲೋ ಇಂಡಿಯಾ ಆಪ್ಗೆ ಚಾಲನೆ ನೀಡಿದರು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣದಲ್ಲಿ ತೊಡಗಿದ್ರು. ಉತ್ತರ ಪ್ರದೇಶದ ಗಾಜಿಪುರದಲ್ಲಿ ಅಮಿತ್ ಶಾ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಿ, ಮಹಾಘಟ ಬಂಧನ್ ಅನ್ನು ಟೀಕಿಸಿದ್ರು. ಒಡಿಶಾದಲ್ಲಿ ಮಾತನಾಡಿದ ಕೇಂದ್ರ ಸಚಿವ ಮನ್ಸೂಕ್ ಲಕ್ಷ್ಮಣ್ಬಾಯ್ ಮಾಂಡವ್ಯ, ಏರ್ ಸ್ಟ್ರೈಕ್ ಮೂಲಕ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ 56 ಇಂಚಿನ ಎದೆಗಾರಿಕೆ ತೋರಿಸಿದ್ದಾರೆ ಎಂದು ಕೊಚ್ಚಿಕೊಂಡರು.
ಏರ್ ಸ್ಟ್ರೈಕ್ಗೆ ಮೊದಲು ಮೋದಿ ಸರ್ಕಾರವನ್ನು ಬೆಂಬಲಿಸಿದ್ದ ವಿಪಕ್ಷಗಳು ಮತ್ತೆ ರಾಜಕೀಯ ಹೈಡ್ರಾಮಾದ ಡೈಲಾಗ್ ಮುಂದುವರಿಸಿವೆ. ಸಂಸತ್ನಲ್ಲಿ ಸಭೆ ನಡೆಸಿದ 21 ವಿಪಕ್ಷಗಳು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಏರ್ ಸ್ಟ್ರೈಕ್ ಬಳಿಕವಾದರೂ ಪ್ರಧಾನಿ ಮೋದಿ ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ಆದರೆ ಇದನ್ನೂ ರಾಜಕೀಯಕ್ಕೆ ಬಳಸಿಕೊಳ್ಳಲಾಗ್ತಿದೆ ಅಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದರು.
ವಿಪಕ್ಷಗಳ ಇಂಥ ಜಂಟಿ ಹೇಳಿಕೆಗಳು ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಅನುಕೂಲಕಾರಿ ಅಂತ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಕಿಡಿಕಾರಿದ್ದಾರೆ. ಈ ಮಧ್ಯೆ, ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲ ಅವರಂತು, ಅಭಿನಂದನ್ ಅವರನ್ನು ವಾಪಸ್ ಕರೆತರುವವರೆಗೂ ಪ್ರಧಾನಿ ಮೋದಿ ತಮ್ಮೆಲ್ಲಾ ರಾಜಕೀಯ ಚಟುವಟಿಕೆಯನ್ನು ರದ್ದುಗೊಳಿಸಬೇಕು ಅಂತ ಟ್ವೀಟ್ ಮಾಡಿದ್ದಾರೆ.
https://www.youtube.com/watch?v=jaId4oGKmkM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv