ಬೆಂಗಳೂರು: ಬಿಜೆಪಿ ಈ ಬಾರಿ ಚುನಾವಣೆಯಲ್ಲಿ 104 ಸೀಟ್ ಪಡೆದ್ರೂ ಸರ್ಕಾರ ರಚನೆಗೆ ಸಾಧ್ಯವಾಗಿಲ್ಲ. ಆದ್ರೂ ನಾಳೆಯೇ ಪ್ರಮಾಣ ವಚನ ಸ್ವೀಕರಿಸಲು ಕಾಲಾವಕಾಶ ನೀಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಅಂತಾ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಎಲ್ಲರ ಸಮ್ಮುಖದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಶಾಸಕಾಂಗದ ನಾಯಕನಾಗಿ ಆಯ್ಕೆಯಾದ ಬಳಿಕ ನೇರವಾಗಿ ರಾಜಭವನಕ್ಕೆ ಹೋಗುತ್ತೇವೆ. ರಾಜ್ಯಪಾಲರನ್ನು ಭೇಟಿ ಮಾಡಿ ನಮ್ಮ ಬೇಡಿಕೆಯನ್ನು ಸಲ್ಲಿಸುತ್ತೇವೆ. ಕಾಂಗ್ರೆಸ್ನ್ನು ಜನರು ತಿರಸ್ಕರಿಸಿದ್ರೂ ಹಿಂಬಾಗಿಲಿನಿಂದ ಬರಲು ಪ್ರಯತ್ನ ಮಾಡುತ್ತಿದೆ ಅಂತಾ ಗರಂ ಆದ್ರು.
ಬೆಳಗ್ಗೆ 8ಗಂಟೆಯಿಂದಲೂ ಯಡಿಯೂರಪ್ಪರ ನಿವಾಸಕ್ಕೆ ಸಾಲು ಸಾಲು ನಾಯಕರು ಭೇಟಿ ನೀಡುತ್ತಿದ್ದಾರೆ. ಕೆ.ಎಸ್.ಈಶ್ವರಪ್ಪ, ಗೋವಿಂದ್ ಕಾರಜೋಳ, ಸಿಎಂ ಉದಾಸಿ, ಜಿ.ಎಂ.ಸಿದ್ದೇಶ್ವರ, ಅರಗ ಜ್ಞಾನೇಂದ್ರ, ಕನನಗಿರಿ ಬಸವರಾಜ ಮತ್ತಿತರ ನಾಯಕರು ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸುತ್ತಿದ್ದಾರೆ.
ಇದೇ ವೇಳೆ ಮಾತನಾಡಿದ ಶಾಸಕ ಗೋವಿಂದ ಕಾರಜೋಳ, ಬಿಜೆಪಿ ಪಕ್ಷವನ್ನ ಬೆಂಬಲಿಸಿದ್ದಕ್ಕೆ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಸಂವಿಧಾನ ಬದ್ಧವಾಗಿ ನಾವೇ ಸರ್ಕಾರ ರಚನೆ ಮಾಡ್ತೀವಿ ಅಂತಾ ಹೇಳಿದ್ರು.