ಬೆಂಗಳೂರು: ನಾವು ಯಾವ ಸಮುದಾಯದ ಅಧಿಕಾರಿಗಳನ್ನೂ ವರ್ಗ ಮಾಡಿಲ್ಲ. ಯಾರನ್ನೂ ವರ್ಗ ಮಾಡದೆ ನಾನೇನು ಉತ್ತರ ಕೊಡಲಿ ಎಂದು ಕಾಗಿನೆಲೆಶ್ರೀಗಳಿಗೆ ಆರೋಪಕ್ಕೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಕುರುಬ ಸಮುದಾಯದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ ಕುಮಾರಸ್ವಾಮಿ, ನಾವು ಯಾವ ಸಮುದಾಯದ ಅಧಿಕಾರಿಗಳನ್ನೂ ವರ್ಗ ಮಾಡಿಲ್ಲ. ಹೀಗಾಗಿ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವ ಪ್ರಶ್ನೆಯೇ ಇಲ್ಲ. ಯಾರನ್ನೂ ವರ್ಗಮಾಡದೇ ನಾನೇನು ಉತ್ತರ ಕೊಡಲಿ ಎಂದು ಪ್ರಶ್ನೆ ಮಾಡಿ ನಗುಮುಖದಲ್ಲೇ ಮಾತನಾಡಿದರು.
ಇದಕ್ಕೂ ಮುನ್ನ ದಾವಣೆಗೆರೆಯ ಬೆಳ್ಳೂಡಿಯ ಕಾಗಿನೆಲೆ ಕನಕ ಗುರು ಪೀಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಿರಂಜಾನಂದಪುರಿ ಸ್ವಾಮೀಜಿ, ಸಾಕಷ್ಟು ಅಧಿಕಾರಿಗಳು ನನ್ನ ಬಳಿ ಬಂದು ವರ್ಗಾವಣೆ ಮಾಡುತ್ತಿರುವ ಕುರಿತು ಅಳಲು ತೊಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದರು.
ಇದೇ ವೇಳೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆರ್.ಶಂಕರ್ ಅವರಿಗೆ ಮಂತ್ರಿಗಿರಿ ನೀಡಿದ್ದು, ಪಕ್ಷೇತರ ಎಂಬ ಉದ್ದೇಶಕ್ಕೆ ಹೊರತು ಕುರುಬ ಸಮಾಜದವರು ಅಂತಾ ಅಲ್ಲ. ನಮ್ಮ ಸಮಾಜಕ್ಕೆ ಎರಡು ಸಚಿವ ಸ್ಥಾನ ಕೊಡಬೇಕಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಗೌಡರು, ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದೆ. ಕುರುಬ ಸಮುದಾಯಕ್ಕೆ ಉತ್ತಮ ಸ್ಥಾನ ಮಾನ ಒದಗಿಸಿಕೊಡಬೇಕು ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಶ್ರೀಗಳು ಎಚ್ಚರಿಕೆ ನೀಡಿದ್ದರು. ಇದನ್ನು ಓದಿ: ಟಗರು ಹೆಜ್ಜೆ ಹಿಂದಕ್ಕೆ ಇಟ್ಟಿದೆ ಅಂದ್ರೆ ಮುಂದೆ ಹೆಜ್ಜೆ ಇಡಲು ಸಿದ್ಧವಾಗುತ್ತಿದೆ ಎಂದರ್ಥ: ಸಿದ್ದು ಪರ ಕಾಗಿನೆಲೆ ಶ್ರೀ ಬ್ಯಾಟಿಂಗ್