ಉಡುಪಿ: ಪತ್ನಿ ಮಕ್ಕಳನ್ನು ಕೊಂದು ವ್ಯಕ್ತಿ ನೇಣಿಗೆ ಶರಣಾದ ಘಟನೆ ಉಡುಪಿಯ ಗೋಳಿಯಂಗಡಿ ವ್ಯಾಪ್ತಿಯಲ್ಲಿ ನಡೆದಿದೆ.
ಸೂರ್ಯನಾರಾಯಣ ಭಟ್ (50) ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೂರ್ಯನಾರಾಯಣ ತನ್ನ ಪತ್ನಿ ಮಾನಸಿ (40) ಹಾಗೂ ಪುತ್ರರಾದ ಸುಧೀಂದ್ರ (14) ಸುಧೀಶ್ (8)ನನ್ನು ವಿಷ ಕೊಟ್ಟಿದ್ದಾನೆ. ಬಳಿಕ ವಿಷ ಸೇವಿಸಿ ಅಸ್ವಸ್ಥರಾಗಿದ್ದ ಮೂವರನ್ನು ರಾಡ್ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಮೂವರು ಪ್ರಾಣಬಿಟ್ಟ ನಂತರ ಸೂರ್ಯನಾರಾಯಣ ನೇಣಿಗೆ ಶರಣಾಗಿದ್ದಾನೆ. ಪತಿ-ಪತ್ನಿ ನಡುವಿದ್ದ ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಆಗಿರಬಹುದು ಎನ್ನಲಾಗಿದೆ. ಅಡುಗೆ ಕೆಲಸಕ್ಕೆ ಹೋಗುತ್ತಿದ್ದ ಸೂರ್ಯನಾರಾಯಣ ಭಟ್ ಫೋನ್ ರಿಸೀವ್ ಮಾಡದ ಕಾರಣ ಆತನ ಸಹೋದರ ಮನೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.
ಮನೆಯಲ್ಲಿ ನಾಲ್ವರು ಮೃತಪಟ್ಟಿದ್ದನ್ನು ನೋಡಿದ ಸೂರ್ಯನಾರಾಯಣ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಶಂಕರನಾರಾಯಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.