ಬೆಂಗಳೂರು: ಮಂಗಳೂರು ಚಲೋ ರ್ಯಾಲಿ ನಡೆಸುತ್ತಿರುವ ಬಿಜೆಪಿ ವಿರುದ್ಧ ಹುಚ್ಚಾ ವೆಂಕಟ್ ಕಿಡಿ ಕಾರಿದ್ದಾರೆ.
ಮಂಗಳೂರಿಗೆ ಹೋದ್ರೆ ರಾಜ್ಯದಲ್ಲಿರೋ ಸಮಸ್ಯೆ ಸರಿಹೋಗುತ್ತಾ? ವಿಧಾನಸೌಧಕ್ಕೆ ಹೋಗಿ, ಸಿಎಂ ಹತ್ತಿರ ಹೋಗಿ, ಇಲ್ಲ ಮೋದಿ ಹತ್ತಿರ ಹೋಗಿ. ಅದು ಬಿಟ್ಟು ಮಂಗಳೂರಿಗೆ ಹೋಗಿ ಏನ್ ಸಾಧನೆ ಮಾಡೋಕೆ ಹೊರಟಿದ್ರಾ ಅಂತ ಹುಚ್ಚ ವೆಂಕಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆ ಹುಬ್ಬಳಿ ರ್ಯಾಲಿ, ತುಮಕೂರು, ಮಂಡ್ಯ ರ್ಯಾಲಿ ಮಾಡಿ. ಏನ್ರಿ ಇದೆಲ್ಲಾ? ನಿಮಗೆ ರಾಜಕೀಯ ಗೊತ್ತಾ? ಅಂತ ಕಿಡಿ ಕಾರಿದ್ದಾರೆ. ಈ ಆಕ್ರೋಶದ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹರಿಯಬಿಟ್ಟಿದ್ದಾರೆ.
ರಮಾನಾಥ್ ರೈ ರಾಜೀನಾಮೆ, ಪಿಎಫ್ಐ ಮತ್ತು ಎಸ್ಡಿಪಿಐ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ರ್ಯಾಲಿಗೆ ಇವತ್ತು ಕೊನೆಯ ದಿನ. ನಿರ್ಬಂಧದ ನಡುವೆಯೂ `ಮಂಗಳೂರು ಚಲೋ’ ರ್ಯಾಲಿಗೆ ಬಿಜೆಪಿ ಕಸರತ್ತು ನಡೆಸಿದೆ. ಜ್ಯೋತಿ ವೃತ್ತದಿಂದ ಹಿಡಿದು ಸ್ಟೇಟ್ ಬ್ಯಾಂಕ್ ವೃತದವರೆಗೂ ಬಿಜೆಪಿ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಕೊಲೆ ಮಾಡಿದವರ ಬಂಧನಕ್ಕೆ ಆಗ್ರಹಿಸಿದ್ದಾರೆ.
ರ್ಯಾಲಿ ಗೆ ಪರ್ಮೀಷನ್ ನೀಡದ ಪೊಲೀಸರ ಜೊತೆ ಸಂಸದ ನಳೀನ್ ಕುಮಾರ್ ಕಟೀಲ್ ವಾಗ್ವಾದಕ್ಕಿಳಿದ ಘಟನೆಯೂ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಜ್ಯೋತಿ ವೃತ್ತದಲ್ಲಿ ಸಾವಿರಾರು ಪೊಲೀಸರು ಜಮಾಯಿಸಿದ್ದಾರೆ.