ದಾವಣಗೆರೆ: ಮದುವೆಯಾಗಿ ಮೂರು ತಿಂಗಳಿಗೆ ಅನುಮಾನಸ್ಪದವಾಗಿ ಗೃಹಿಣಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೀಯಾಪುರದಲ್ಲಿ ನಡೆದಿದೆ.
ರೂಪಬಾಯಿ(22) ವಿಷ ಸೇವನೆ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಗೃಹಿಣಿ. ರೂಪಾಬಾಯಿ ಸಾವು ಕೊಲೆ ಎಂದು ಕೇಳಿಬರುತ್ತಿದ್ದು, ಇದಕ್ಕೆ ಕಾರಣ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿ, ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.
ರೂಪಬಾಯಿ ಮೂರು ತಿಂಗಳ ಹಿಂದೆ ಗಂಗಾಧರ್(32) ಜೊತೆ ಮದುವೆಯಾಗಿದ್ದಳು. ಮದುವೆಗೆ ರೂಪಬಾಯಿ ಪೋಷಕರು ವರದಕ್ಷಿಣೆ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಗಾಧರ್ ಪೋಷಕರು 3ಗ್ರಾಂ ಚಿನ್ನ ಕಡಿಮೆ ನೀಡಿದ್ದಾರೆ ಎಂದು ರೂಪಬಾಯಿಗೆ ಕಿರುಕುಳ ನೀಡುತ್ತಿದ್ದರು. ಜೊತೆಗೆ ರೂಪಬಾಯಿ ಒಂದುವರೆ ತಿಂಗಳ ಗರ್ಭಿಣಿಯಾಗಿದ್ದರೂ, ಗಂಡನ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಡಿಪಿ ಹಾಕಿದ ಆರ್ಎಸ್ಎಸ್
ವರದಕ್ಷಿಣೆ ಕಡಿಮೆ ನೀಡಿರುವುದಕ್ಕೆ ರೂಪಬಾಯಿಯ ಮೇಲೆ ಆಕೆಯ ಪತಿಯ ಮನೆಯವರು ಹಲ್ಲೆ ಮಾಡಿ, ವಿಷ ಕುಡಿಸಿ ನಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಷ್ಟೇ ಅಲ್ಲದೇ, ರೂಪಬಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಿ 2 ದಿನದ ನಂತರ ಗಂಗಾಧರ್ ವಿಷಯ ತಿಳಿಸಿದ್ದಾನೆ ಎಂದು ಗಂಡನ ಮನೆಯವರ ವಿರುದ್ಧ ರೂಪಬಾಯಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ವಿಷ ಸೇವಿಸಿ ತೀವ್ರ ಗಂಭೀರ ಪರಿಸ್ಥಿತಿಯಲ್ಲಿದ್ದ ರೂಪಾಬಾಯಿ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಮುಂಭಾಗದಲ್ಲಿ ರೂಪಬಾಯಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧಿಸಿ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ