ನವದೆಹಲಿ: ಬಿಬಿಎಂಪಿ ವ್ಯಾಪ್ತಿಯ ವಾರ್ಡ್ಗಳ ಪುನರ್ ವಿಂಗಡನೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ಮಾಡುವ ಅಧಿಕಾರ ರಾಜ್ಯ ಹೈಕೋರ್ಟ್ಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಬಗ್ಗೆ ಕೆಲವು ಪಾಲಿಕೆ ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ನಜೀರ್ ಅಹ್ಮದ್ ನೇತೃತ್ವದ ದ್ವಿ ಸದಸ್ಯ ಪೀಠ, ವಾರ್ಡ್ಗಳ ಪುನರ್ ವಿಂಗಡನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರ ಹೊಂದಿದೆ. ವಿಚಾರಣೆ ಬಳಿಕ ಚುನಾವಣೆ ಬಗ್ಗೆಯೂ ಹೈಕೋರ್ಟ್ ನಿರ್ಧರಿಸಬಹುದು ಎಂದು ಮೌಖಿಕ ಆದೇಶ ನೀಡಿದೆ. ಇದನ್ನೂ ಓದಿ: ಆರಗ, VVIP ವ್ಯಕ್ತಿಗಳಿಗೆ ನಿವೇಶನ – ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂ ಸೂಚನೆ
ಸದ್ಯ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿರುವ ಎಂ. ಶಿವರಾಜು ಮೂಲ ಪ್ರಕರಣವನ್ನು ಹಾಗೇ ಉಳಿಸಿಕೊಳ್ಳಲಿದ್ದು ಎಂಟು ವಾರಗಳ ಬಳಿಕ ಪಟ್ಟಿ ಮಾಡಲಿದ್ದು ಆಕ್ಷೇಪಣೆಗಳಿದ್ದಲ್ಲಿ ಅಂದು ಗಮನಕ್ಕೆ ತರಬಹುದು ಎಂದು ಕೋರ್ಟ್ ಹೇಳಿದೆ.
ವಾರ್ಡ್ ಪುನರ್ ವಿಂಗಡನೆ ಪ್ರಶ್ನಿಸಿ ಹಲವು ಪಾಲಿಕೆ ಸದಸ್ಯರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಸುಪ್ರೀಂಕೋರ್ಟ್ನಲ್ಲಿದ್ದ ಕಾರಣ ವಿಚಾರಣೆ ನಡೆಸಲು ಸುಪ್ರೀಂ ಅನುಮತಿ ಬೇಕು ಎಂದು ಹೈಕೋರ್ಟ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಅರ್ಜಿದಾರರು ಸುಪ್ರೀಂಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ಎಂಟು ವಾರಗಳಲ್ಲಿ, ಮತ್ತೊಮ್ಮೆ ಒಂದು ವಾರದಲ್ಲಿ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು.