ಹಾಸನ: ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುವ ಭೀತಿ ಉಂಟಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಹಾಗೂ ಭಾನುವಾರ ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಜನ ಜೀವನದಲ್ಲಿ ವ್ಯತ್ಯಯ ಉಂಟಾಗಿದೆ. ಉತ್ತಮ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ನಡುವಿನ 86/100 ಮೈಲಿನಲ್ಲಿ ಗುಡ್ಡ ಕುಸಿಯುವ ಭೀತಿ ಉಂಟಾಗಿದೆ. ರೈಲು ಹಳಿ ತುಂಬೆಲ್ಲಾ ನೀರು ತುಂಬಿದೆ. ರೈಲು ಮಾರ್ಗದ ಅಕ್ಕಪಕ್ಕದ ಗುಡ್ಡ ಯಾವಾಗ ಬೇಕಾದರೂ ಹಳಿ ಮೇಲೆ ಕುಸಿಯಬಹುದು ಎನ್ನುವ ಆತಂಕ ಎದುರಾಗಿದೆ.
ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಹೀಗೇ ಮುಂದುವರಿದರೆ ಕಲ್ಲು ಬಂಡೆ ಮತ್ತು ಗುಡ್ಡ ರೈಲು ಹಳಿಯ ಮೇಲೆ ಜಾರುವ ಸಂಭವವಿದೆ ಎಂದು ರೈಲ್ವೇ ಅಧಿಕಾರಿಗಳ ಮೂಲಗಳು ತಿಳಿಸಿದೆ.
ರೈಲ್ವೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಈಗಲೂ ಸಣ್ಣಪುಟ್ಟ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.