ಹಾಸನ: ಸುಮಾರು ಹತ್ತು ಕಡೆಗಳಲ್ಲಿ ಮನೆ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳನನ್ನು ಹಾಸನ (Hassan) ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 31 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಆಲೂರಿನ ಮುದಿಗೆರೆ ಗ್ರಾಮದ ಸಂತೋಷ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ 30,61,812 ರೂ. ಮೌಲ್ಯದ 521 ಗ್ರಾಂ ಚಿನ್ನಾಭರಣ, 36,112 ರೂ. ಮೌಲ್ಯದ 488 ಗ್ರಾಂ ಬೆಳ್ಳಿಯ ಆಭರಣ, 1 ಬೈಕ್ ಹಾಗೂ 16 ಸಾವಿರ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಆಳವಾದ ಕಂದಕಕ್ಕೆ ಉರುಳಿದ ಕ್ಯಾಬ್ – 7 ಮಂದಿ ದುರ್ಮರಣ
ಆರೋಪಿ ಬೇಲೂರಿನ ಹನಿಕೆ ಗ್ರಾಮದ ಅಶ್ವಥ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದ. ಈ ಪ್ರಕರಣದಲ್ಲಿ ಆತನನ್ನು ಕೋಗಿಲಮನೆ ಬಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ವೇಳೆ ಹಲವು ಮನೆಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಕದ್ದ ಒಡವೆಗಳನ್ನು ಕುಶಾಲನಗರದ ರಥ ಬೀದಿಯಲ್ಲಿರುವ ಶೀತಲ್ ಹಾಗೂ ಶ್ರೀನಾಥ್ ಎಂಬವರ ಜ್ಯುವೆಲರಿಗೆ ಪದ್ಮಾವತಿ ಮತ್ತು ಹರೀಶ್ ಎಂಬವರ ಮೂಲಕ ಮಾರಾಟ ಮಾಡಿದ್ದ ಎಂದು ತಿಳಿದು ಬಂದಿದೆ.
ಸಂತೋಷ್ ವಿರುದ್ಧ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5, ಅರೇಹಳ್ಳಿಯಲ್ಲಿ 2, ಬೇಲೂರಿನಲ್ಲಿ 1, ಹಾಸನ ಗ್ರಾಮಾಂತರ 1, ಕೆ.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣ ದಾಖಲಾಗಿದೆ. ಆರೋಪಿ 2013 ರಿಂದ 58 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಂತೇವಾಡದಲ್ಲಿ ನಕ್ಸಲರ ಬೃಹತ್ ಸುರಂಗ ಪತ್ತೆ – ಭದ್ರತಾ ಪಡೆಗಳಿಂದ ತೀವ್ರ ಶೋಧ