ಬೆಂಗಳೂರು: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಗೌರವಿಸಿ, ಪ್ರೋತ್ಸಾಹಿಸಲು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲೂ ಜಾತಿ ಪಾಲಿಟಿಕ್ಸ್ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಶಸ್ತಿ ಆಯ್ಕೆ ಸಮಿತಿಯವರು ಜಾತಿ ಕೇಳಿ ವಿಕಲಚೇತನ ಕ್ರೀಡಾಪಟುವಿಗೆ ಅವಮಾನ ಮಾಡಿದ್ದಾರೆ.
ಈ ಜಾತಿ ರಾಜಕೀಯ ನೋಡಿ ಬೇಸತ್ತ ಬೆಂಗಳೂರಿನ ವಿಜಯನಗರದ ನಿವಾಸಿ ಅಂತಾರಾಷ್ಟ್ರೀಯ ಕ್ರೀಡಾಪಟು ರಾಘವೇಂದ್ರ ಪಬ್ಲಿಕ್ ಟಿವಿ ಜೊತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಭರತಕ್ಕೆ ಚಿನ್ನದ ಪದಕ ತಂದುಕೊಟ್ಟ ರಾಘವೇಂದ್ರ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕಮಿಟಿ ಅವಮಾನ ಮಾಡಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ರಾಜ್ಯೋತ್ಸವ ಪ್ರಶಸ್ತಿ ಪಡೆಯೋದಕ್ಕೂ ಜಾತಿ ಲೆಕ್ಕಚಾರ ಬೇಕಾ? ಎರಡು ಕಾಲು ಸ್ವಾಧೀನವಿಲ್ಲದೇ ಇದ್ದರೂ ಬದುಕಿಗೆ ಸವಾಲೆಸೆದು, ಷಾಟ್ಪುಟ್, ಡಿಸ್ಕಸ್ ಎಸೆತ, ಬ್ಯಾಡ್ಮಿಂಟನ್, ದೇಹದಾಡ್ರ್ಯ ಸ್ಫರ್ದೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕವನ್ನು ರಾಘವೇಂದ್ರ ಅವರು ಭಾರತಕ್ಕಾಗಿ ಗೆದ್ದು, ಕೀರ್ತಿ ತಂದಿದ್ದಾರೆ. ಆದರೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ ರಾಘವೇಂದ್ರಗೆ ಕಳೆದೆರಡು ವಾರದ ಹಿಂದೆ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಕರೆ ಬಂದಿತ್ತು. ಕಮಿಟಿ ಸದಸ್ಯರು ನೇರವಾಗಿ ನಿಮ್ಮದ್ಯಾವ ಜಾತಿ, ಯಾವ ಊರು ಎಂದು ಕೇಳಿದರು. ಈ ವಿಚಾರ ರಾಘವೇಂದ್ರವರರಿಗೆ ನೋವು ತಂದಿದ್ದು, ನಾವು ನಮ್ಮ ಬದುಕಿನ ಸವಾಲನ್ನು ಮೆಟ್ಟಿನಿಂತು ಸಾಧನೆ ಮಾಡಿದರೆ ಇವರು ಜಾತಿ ಲೆಕ್ಕಚಾರ ಹಾಕಿ ಪ್ರಶಸ್ತಿ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಈ ಬಾರಿ ಪ್ಯಾರ ಒಲಿಂಪಿಕ್ಸ್ ನಲ್ಲಿ ಸಾಧನೆಗೈದ ಯಾರಿಗೂ ಪ್ರಶಸ್ತಿ ನೀಡಿಲ್ಲ, ಈ ರೀತಿ ಜಾತಿ ಲೆಕ್ಕಚಾರ ಹಾಕೋದು ನಿಜಕ್ಕೂ ನಾಚಿಕೆಗೇಡು ಎಂದು ರಾಘವೇದ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಸಿಎಂ ಅವರಿಗೂ ಗೊತ್ತಿದೆಯಾ? ಜಾತಿ ಲೆಕ್ಕಚಾರ ಹಾಕಿ ಕೊಡಲು ಇದೇನು ಎಲೆಕ್ಷನ್ ಟಿಕೇಟ್ ಹಂಚಿಕೆನಾ? ವಿಕಲಚೇತನ ಪ್ರತಿಭೆ ರಾಘವೇಂದ್ರರಿಗೆ ಸರ್ಕಾರ ಏನು ಉತ್ತರ ಕೊಡುತ್ತೆ? ಪ್ರಶಸ್ತಿ ಪರಿಗಣನೆ ಮಾಡೋದು ಬೇಡ ಆದರೆ ಜಾತಿ ಲೆಕ್ಕಚಾರ ಯಾಕೆ ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ. ಹೀಗಾಗಿ ಈ ಬಗ್ಗೆ ಸಿಎಂ ಯಡಿಯೂರಪ್ಪ, ಸಚಿವರು ಹಾಗೂ ಅಧಿಕಾರಿಗಳು ಗಮನಕೊಟ್ಟು ಈ ರೀತಿ ಜಾತಿ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಿ, ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ.