– ಸಿದ್ದರಾಮಯ್ಯ ಇದ್ದಾಗಲೂ ನಮ್ಮ ಪಕ್ಷದಲ್ಲಿ 19% ಮತ ಬರುತ್ತಿತ್ತು, ಈಗಲೂ ಬರುತ್ತಿದ್ದೆ
ರಾಮನಗರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ಮೇಲೆ ಅಷ್ಟೊಂದು ಕನಿಕರ ಇಟ್ಟಿದಕ್ಕೆ ಧನ್ಯವಾದ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ಜಾರಕಿಹೊಳಿ ಜೆಡಿಎಸ್ ಬಗ್ಗೆ ಕೊಟ್ಟ ಹೇಳಿಕೆ ಕುರಿತು ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಅವರು ನಾವು ಕಾಂಗ್ರೆಸ್ ನಿಂದ 16 ಜನರನ್ನು ತಯಾರು ಮಾಡಿದ್ದೇವೆ. ಆದರೆ ಜೆಡಿಎಸ್ಗೆ ಕೈ ಹಾಕುವುದಿಲ್ಲ ಎಂದಿದ್ದಾರೆ. ನಮ್ಮ ಪಕ್ಷದ ಬಗ್ಗೆ ಅಷ್ಟೋಂದು ಕನಿಕರ ಇಟ್ಟುಕೊಂಡಿರುವುದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ನಾನು ಅವರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದರು.
ಜೆಡಿಎಸ್ ಪಕ್ಷವನ್ನು ನಾವು ಕದಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಷ್ಟಾದರೂ ನಮಗೆ ಅವರು ಗೌರವ ಕೊಟ್ಟಿರುವುದಕ್ಕೆ ನಮ್ಮ ಕಡೆಯಿಂದ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ
ಇದೇ ವೇಳೆ ಜೆಡಿಎಸ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಅವರು, ಕಾಂಗ್ರೆಸ್ ನಾಯಕರು ನಾನು ಜೆಡಿಎಸ್ ಅಲ್ಲಿ ಇದ್ದಾಗ ಎಲ್ಲಿರೀ ಕುಮಾರಸ್ವಾಮಿ ಇದ್ರೂ ಎಂದು ಪ್ರಶ್ನೆ ಕೇಳಿದ್ದಾರೆ. ಆದರೆ ಅವರು ನಮ್ಮ ಪಕ್ಷದಲ್ಲಿ ಅಧ್ಯಕ್ಷರಾಗಿ ದುಡಿದಿದ್ದಕ್ಕೆ ನನ್ನ ಶ್ರಮ, ದುಡಿಮೆಯೂ ಇದೆ. ಇವತ್ತು ಅದನ್ನು ಅವರು ಮರೆತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಯಾರು ನಿಷ್ಠಾವಂತ ಸದಸ್ಯರಿದ್ದರೂ, ಅವರನ್ನು ಮೂಲೆಗುಂಪು ಮಾಡಿ ಇವತ್ತು ಅವರೇ ಮುಂದೆ ಇದ್ದಾರೆ. ಅದೇ ರೀತಿ ಅವರು ನಮ್ಮ ಪಕ್ಷದಲ್ಲಿ ಇದ್ದಾಗಲೂ ಆಗುತ್ತಿತ್ತು ಎಂದು ವಿವರಿಸಿದರು.
ನಮ್ಮಂತಹ ಕಾರ್ಯಕರ್ತರು ನಾವು ಸಂಪಾದಿಸಿದ ಹಣವನ್ನು ಪಕ್ಷದ ಸಂಘಟನೆಗೆ, ಪಕ್ಷದ ಕಾರ್ಯಕ್ರಮಗಳಿಗೆ ಹಾಕುತ್ತೇವೆ. ಇವರು ಅಧ್ಯಕ್ಷರಾದಾಗ ಜನರನ್ನು ನಾವೇ ಸೇರಿಸಿದ್ದೇವೆ. ಕಾರ್ಯಕ್ರಮಕ್ಕೆ ಬೇಕಾಗಿದ್ದ ಎಲ್ಲ ಸಿದ್ಧತೆಗಳನ್ನು ಮಾಡಿ ನಾವು ಹಿಂದೆ ಇರುತ್ತಿದ್ದೆವು ಎಂದರು.
58 ಸೀಟ್ ಗೆದ್ದಿದ್ದು ಅವರಿಂದ ಎಂದು ಸಿದ್ದರಾಮಯ್ಯ ಅವರು ಹೇಳಿಕೊಂಡು ಬರುತ್ತಿದ್ದಾರೆ. ಆ 58 ಸೀಟ್ ನಲ್ಲಿಯೂ ಕುಮಾರಸ್ವಾಮಿ ಧೆಣಿಗೆ ಇದೆ. ಚುನಾವಣೆಯ ಸಂಪೂರ್ಣ ಜವಾಬ್ದಾರಿ ಮತ್ತು ವೆಚ್ಚವನ್ನು ನೋಡಿಕೊಂಡಿದ್ದು ಕುಮಾರಸ್ವಾಮಿ. ನಾನು ಈ ಬಗ್ಗೆ ಹಲವಾರು ಉದಾಹರಣೆಯನ್ನು ಕೊಡಬಲ್ಲೆ. ಯಾವ ಕ್ಷೇತ್ರಕ್ಕೆ ಎಷ್ಟು ಹಣಕೊಟ್ಟಿದ್ದೇನೆ ಎಂದು ನಾನು ಹೇಳಬಲ್ಲೆ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರಿಂದ ಪಕ್ಷ ಗೆದ್ದಿಲ್ಲ. ದೇವೇಗೌಡರಿಂದ ಗೆದ್ದಿರುವುದು. ಪಕ್ಷದ ಲಕ್ಷಾಂತರ ಕಾರ್ಯಕರ್ತರ ದುಡಿಮೆಯಿಂದ ನಾವು ಗೆದ್ದಿದ್ದೇವೆ. ನಾನು ಬಂದ ಮೇಲೆ ಪಕ್ಷ ಏನಾಯಿತು ಎಂದು ಅವರು ಕೇಳಿದ್ದಾರೆ. ಅವರು ಹೋದ ಮೇಲೆಯೂ ನಮ್ಮ ಪಕ್ಷ ಒಂದು ಚುನಾವಣೆಯಲ್ಲಿ 28 ಸೀಟ್, ಒಂದು ಸಂದರ್ಭದಲ್ಲಿ 40 ಸೀಟ್ ಗೆದ್ದಿದ್ದೇವೆ. ಯಾರು ಇಲ್ಲದೆ ನಮ್ಮ ಪಕ್ಷ 40 ಸ್ಥಾನ ಗೆದ್ದಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳನ್ನ ಬಸ್ಸಿನಲ್ಲಿ ತಾವೇ ಡ್ರೈವ್ ಮಾಡಿ ರೌಂಡ್ ಹಾಕಿಸಿದ ಶಿವಣ್ಣ
ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಇದ್ದಾಗ ನಮ್ಮ ಪಕ್ಷಕ್ಕೆ 19% ಮತ ಬರುತ್ತಿತ್ತು. ಅವರು ಹೋದ ಮೇಲೆಯೂ ಸಹ ನಮ್ಮ ಪಕ್ಷದ ಮತ ಅದೇ ರೀತಿ ಇದೆ. ಇದಕ್ಕೆ ಕಾರಣ ಯಾರು ನನ್ನ ಕಾರ್ಯಕರ್ತರು ಎಂದರು.