ಲಕ್ನೋ: ಜ್ಞಾನವಾಪಿ (Gyanvapi) ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ (Varanasi Court) ಆದೇಶ ಪ್ರಶ್ನಿಸಿ ಮಸೀದಿ ನಿರ್ವಹಣಾ ಸಮಿತಿ ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಅಲಹಾಬಾದ್ ಹೈಕೋರ್ಟ್ನ (Allahabad High Court) ಮೆಟ್ಟಿಲೇರಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಅವರ ಮುಂದೆ ಹಿರಿಯ ವಕೀಲ ಎಸ್ಎಫ್ಎ ನಖ್ವಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಈ ವೇಳೆ ವಿಷಯವನ್ನು ತುರ್ತು ಪಟ್ಟಿಯಲ್ಲಿ ಸೇರಿಸಲು ರಿಜಿಸ್ಟ್ರಾರ್ ಬಳಿಗೆ ಹೋಗುವಂತೆ ನ್ಯಾಯಮೂರ್ತಿ ಸೂಚಿಸಿದ್ದಾರೆ. ಅದರಂತೆ ವಕೀಲ ನಖ್ವಿ ಪ್ರಕರಣವನ್ನು ತುರ್ತು ಪಟ್ಟಿ ಸೇರಿಸುವಂತೆ ರಿಜಿಸ್ಟ್ರಾರ್ಗೆ ಮನವಿ ಮಾಡಿದ್ದಾರೆ. ಸದ್ಯದಲ್ಲೇ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ
ನೆಲಮಾಳಿಗೆಯಲ್ಲಿರುವ ವ್ಯಾಸ್ ಜಿ ಕಾ ತೆಹ್ಖಾನಾದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿ ವಾರಣಾಸಿ ಜಿಲ್ಲಾ ನ್ಯಾಯಾಲಯ ಜ.31 ರಂದು ಆದೇಶ ನೀಡಿತ್ತು. ಇದರ ವಿರುದ್ಧ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಮನವಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ಸಮಿತಿ ಹೈಕೋರ್ಟ್ ಮೊರೆ ಹೋಗಿದೆ. ಈ ನಡುವೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಜ್ಞಾನವಾಪಿ ಮಸೀದಿಯ ನೆಲ ಮಾಳಿಗೆಯಲ್ಲಿ ಪೂಜೆ ಪ್ರಾರಂಭಗೊಂಡಿದೆ.
ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಮುಚ್ಚಿದ ನೆಲಮಾಳಿಗೆ ತೆಹ್ಖಾನಾ ಒಳಗಡೆ ಹಿಂದೂಗಳು ಪೂಜಾ ವಿಧಿಗಳನ್ನು ನಡೆಸಲು 7 ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಇದನ್ನೂ ಓದಿ: Gyanvapi Mosque Case: ವಜುಖಾನಾ ಡಿ-ಸೀಲಿಂಗ್ಗೆ ಹಿಂದೂ ಪರ ಅರ್ಜಿದಾರರಿಂದ ಸುಪ್ರೀಂಕೋರ್ಟಿಗೆ ಅರ್ಜಿ