ಮೈಸೂರು: ಜೆಡಿಎಸ್ ವರಿಷ್ಠರ ಜೊತೆ ಮುನಿಸಿಕೊಂಡಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಹುಣಸೂರು ಉಪಚುನಾವಣೆಯಲ್ಲಿ ತಟಸ್ಥ ನಿಲುವು ತೆಳೆದಿದ್ದರು. ಈಗ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲೂ ಅದೇ ಮನಸ್ಥಿತಿ ಮುಂದುವರಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಸದ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದ್ದು, ಒಪ್ಪಂದದ ಪ್ರಕಾರ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ ಸಿಗುತ್ತಿದೆ. ಹೀಗಾಗಿ, ಜೆಡಿಎಸ್ನಲ್ಲಿ ಬಿರುಸಿನ ರಾಜಕೀಯ ಶುರುವಾಗಿದೆ. ಆದರೆ ಆರಂಭದಲ್ಲೆ ನನಗೂ ಇದಕ್ಕೂ ಸಂಬಂಧ ಇಲ್ಲ. ಪಕ್ಷ ಹೇಳಿದವರಿಗೆ ನಾನು ನನ್ನ ಮತ ಹಾಕಿ ಬರುತ್ತೇನೆ ಅಷ್ಟೇ ಎಂದು ಜಿಟಿಡಿ ಹೇಳಿದ್ದು, ಈ ಹೇಳಿಕೆ ಜಿಟಿಡಿ, ಬೆಂಬಲಿಗ ಪಾಲಿಕೆ ಸದಸ್ಯರಲ್ಲಿ ಆತಂಕ ಸೃಷ್ಟಿಸಿದೆ.
ಮೈಸೂರಿನಲ್ಲಿ ಸಾರಾ ಮಹೇಶ್ ಅವರು ಏನು ಹೇಳುತ್ತಾರೋ, ಕುಮಾರಸ್ವಾಮಿ ಅವರು ಅದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ನಾನು ಉಸ್ತುವಾರಿ ಸಚಿವನಾಗಿರಲಿ, ಮತದಾರನಾಗಿರಲಿ, ಯಾವತ್ತೂ ಅವರು ನನ್ನನ್ನು ಮೇಯರ್ ಚುನಾವಣೆಯಲ್ಲಿ ಪರಿಗಣಿಸಿಲ್ಲ. ಹಾಗಾಗಿ ಈಗಲೂ ಅವರೇ ಚುನಾವಣೆ ಮಾಡಲಿ. ಪಕ್ಷ, ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡುತ್ತೋ. ಅವರಿಗೆ ವೋಟ್ ಹಾಕೋದಷ್ಟೇ ನನ್ನ ಕೆಲಸ ಎಂದಿದ್ದಾರೆ.
ಮೇಯರ್ ಚುನಾವಣೆ ನನ್ನ ಕ್ಷೇತ್ರದ ವ್ಯಾಪ್ತಿಗೂ ಬರುತ್ತೆ ಹೀಗಾಗಿ ನಾನು ಕೂಡ ಸದಸ್ಯನಾಗಿ ಇದ್ದೇನೆ ಅಷ್ಟೇ. ಇದನ್ನು ಮೀರಿ ಅಭ್ಯರ್ಥಿ ಆಯ್ಕೆ ರಾಜಕೀಯ ನನಗೆ ಸಂಬಂಧ ಪಟ್ಟಿಲ್ಲ ಎಂದು ಮೈಸೂರಿನಲ್ಲಿ ಜಿಟಿಡಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಮೇಯರ್ ಚುನಾವಣೆಯಲ್ಲಿ ಜಿಟಿಡಿ ಅವರು ತಟಸ್ಥ ನಿಲುವು ಎಂಬುವುದು ಸ್ಪಷ್ಟವಾಗಿದೆ.