– ಸಮ್ಮಿಶ್ರ ಸರ್ಕಾರವು ಮೂರು ಜಿಲ್ಲೆಗಳಿಗೆ ಸೀಮಿತವಾಗಿದೆ
ತುಮಕೂರು: ಮಿಸ್ಟರ್ ರೇವಣ್ಣ ನಿನಗೆ ಒಳ್ಳೆದಾಗಲ್ಲ. ನೀರಾವರಿ ಚೇರಮನ್ ಆಗಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ನೀಡುವಲ್ಲಿ ಪಾಪ ಮಾಡುತ್ತಿದ್ದೀಯಾ ಎಂದು ಮಾಜಿ ಸಚಿವ ಜಿ.ಎಸ್.ಬಸವರಾಜು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.
ಹೇಮಾವತಿ ನಾಲೆಗೆ ಲಿಂಕಿಂಗ್ ಕೆನಾಲ್ ನಿರ್ಮಾಣ ವಿರೋಧಿಸಿ ಇಂದು ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಮಾತನಾಡಿದ ಮಾಜಿ ಸಚಿವರು, ನೀವು ಮಾಡಿರುವ ಪಾಪ ನಿಮ್ಮ ಕುಟುಂಬಕ್ಕೂ ತಟ್ಟಲಿದೆ. ನನ್ನ ನೀರಗಂಟಿ ಅಂತ ಕರೆಯುತ್ತಿರುವಿರಿ. ತುಮಕೂರು ಜಿಲ್ಲೆಯ ಜನತೆಗೆ ಮೋಸ ಮಾಡುತ್ತೀರುವ ನಿಮಗೆ ಒಳ್ಳೆಯದ ಆಗಲ್ಲ ಎಂದರು.
ಸಮ್ಮಿಶ್ರ ಸರ್ಕಾರ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲೆಯವರು. ಮೊದಲಿಗೆ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿದ್ದರು. ಆದರೆ ಈಗ ಹಾಗಲಕಾಯಿ, ಬೇವಿನ ಕಾಯಿ ಒಂದಾದಂತೆ ಆಗಿದ್ದು, ರಾಜ್ಯವನ್ನು ಕಡೆಗಣಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಜೆಟ್, ಯೋಜನೆ, ನೀರಾವರಿ ಸೌಲಭ್ಯಗಳು ಮೂರು ಜಿಲ್ಲೆಗಳಿಗೆ ಮಾತ್ರ ಸೇರುತ್ತಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೇರಿ ಮಾಡಬಾರದ ಪಾಪ ಮಾಡುತ್ತಿವೆ. ಒಂದು ಕಾಲದಲ್ಲಿ ಕಾಲುವೆ ಒಡೆದುಹಾಕಿ ಜೆಡಿಎಸ್ನವರು ಪ್ರತಿಭಟನೆ ಮಾಡಿದ್ದರು. ಜಿಲ್ಲೆಯ ಕಾಲುವೆಗಳಿಗೆ ನೀರು ಬಿಡದೇ 15 ದಿನಗಳು ಕಳೆದಿದೆ. ಇದರಿಂದಾಗಿ ಬೆಳೆ ನಾಶವಾಗುತ್ತಿದ್ದು, ರೈತರು ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv