ಚಿಕ್ಕಬಳ್ಳಾಪುರ: ಗ್ರಾಮಪಂಚಾಯತಿ ಕಚೇರಿಗೆ ಬಂದ ವ್ಯಕ್ತಿಯೊರ್ವ ಪಿಡಿಒ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲ್ ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆದಿದೆ.
ಚಾಕವೇಲ್ ಗ್ರಾಮ ಪಂಚಾಯತಿ ಪಿಡಿಒ ಅಬೂಬಕ್ಕರ್ ಸಿದ್ದೀಕ್ ಮೇಲೆ ರಮಣಪ್ಪ ಹಲ್ಲೆ ಮಾಡಿದ್ದಾನೆ. ಅಂದಹಾಗೆ ಎಸ್ಸಿ ಎಸ್ಟಿ ವಸತಿ ನಿಲಯದಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ರಮಣಪ್ಪ ಕಳೆದ ಒಂದು ವಾರದ ಹಿಂದೆ ಗ್ರಾಮ ಪಂಚಾಯತಿ ಕಚೇರಿಗೆ ಬಂದು, ತಾನು ಚರ್ಮ ಕರಕುಶಲ ಕೆಲಸ ಮಾಡುತ್ತಿರುವುದಾಗಿ ಧೃಢೀಕರಣ ಪತ್ರ ನೀಡುವಂತೆ ಪಿಡಿಒ ಬಳಿ ಕೇಳಿದ್ದ. ಆಯಿತು ಎಲ್ಲಿ ಕೆಲಸ ಮಾಡುತ್ತೀದ್ದೀಯಾ ಅದನ್ನ ಪರಿಶೀಲನೆ ಮಾಡಿ ಎನ್ಓಸಿ ಕೊಡುತ್ತೇನೆ ಅಂತ ಪಿಡಿಒ ಅಬೂಬಕ್ಕರ್ ಹೇಳಿ ಕಳುಹಿಸಿದ್ದರು.
ಇಂದು ಗ್ರಾಮ ಪಂಚಾಯತಿ ಕಚೇರಿಗೆ ಬಂದ ರಮಣಪ್ಪ ಪಿಡಿಒ ಜೊತೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ವಾಗ್ವಾದ ಮಿತಿಮೀರಿ ಪಿಡಿಒಗೆ ಕಪಾಳಮೋಕ್ಷ ಮಾಡಿ ಹಲ್ಲೆ ಮಾಡಿದ್ದಾನೆ. ಕೊರಳ ಪಟ್ಟಿಗೆ ಕೈ ಹಾಕಿ ಪರಸ್ಪರ ಎಳೆದಾಡುಕೊಂಡು ಕಚೇರಿಯಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಅಷ್ಟರಲ್ಲೇ ಅಲ್ಲಿದ್ದ ಸಾರ್ವಜನಿಕರು ಹಲ್ಲೆ ತಡೆದಿದ್ದಾರೆ.
ಸದ್ಯ ಈ ಸಂಬಂಧ ಪಿಡಿಒ ಅಬೂಬಕರ್ ಸಿದ್ದೀಕ್ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಲ್ಲೆಯ ದೃಶ್ಯ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv