-ಗೊಂದಲಕ್ಕೆ ಕಾರಣವಾಯ್ತು ರಾಜ್ಯಪಾಲರು ಬರೆದ ಪತ್ರ
ಬೆಂಗಳೂರು: ರಾಜ್ಯಪಾಲ ವಜುಭಾಯಿ ವಾಲಾ ಅವರು ಬರೆದ ಪತ್ರವೊಂದು ಹಲವು ಅನುಮಾನ ಮತ್ತು ಗೊಂದಲಕ್ಕೆ ಕಾರಣವಾಗಿದೆ. ಐಎಂಎ ಪ್ರಕರಣದಲ್ಲಿ ಮಾಜಿ ಸಚಿವ, ರೋಷನ್ ಬೇಗ್ ಆರೋಪಿಯೋ ಅಥವಾ ಸಾಕ್ಷಿಯೋ ಎಂಬ ಗೊಂದಲವನ್ನು ಹುಟ್ಟು ಹಾಕಿದೆ.
ರಾಜ್ಯಪಾಲರು ರೋಷನ್ ಬೇಗ್ ಪರವಾಗಿ ತನಿಖಾಧಿಕಾರಿ ರವಿಕಾಂತೇಗೌಡರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ರೋಷನ್ ಬೇಗ್ ತಮ್ಮ ಶಾಸಕ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಐಎಂಎ ಪ್ರಕರಣದಲ್ಲಿ ಸಾಕ್ಷಿಯಾಗಿರುವ ರೋಷನ್ ಬೇಗ್ ಅವರಿಗೆ ಸೂಕ್ತ ಭದ್ರತೆ ಮತ್ತು ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಬೇಕು ಎಂದು ಬರೆದಿದ್ದಾರೆ. ಪತ್ರದಲ್ಲಿ ರೋಷನ್ ಬೇಗ್ ಸಾಕ್ಷಿ ಎಂದು ಉಲ್ಲೇಖಿಸಲಾಗಿದೆ.
ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಸಾಕ್ಷಿಯೋ ಅಥವಾ ಆರೋಪಿಯೋ ಎಂಬುವುದು ನಿರ್ಧಾರ ಆಗಿಲ್ಲ. ತನಿಖಾಧಿಕಾರಿಗಳ ನಿರ್ಧಾರ ಮುನ್ನವೇ ರಾಜ್ಯಪಾಲರು ಸಾಕ್ಷಿ ಅಂದಿದ್ದು ಯಾಕೆ? ರೋಷನ್ ಬೇಗ್ ಪರ ರಾಜ್ಯಪಾಲರು ನಿಂತಿದ್ಯಾಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
2019 ಜುಲೈ 16ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಅಂದು ರಾತ್ರಿ ವಶಕ್ಕೆ ಪಡೆದು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡು ಮರುದಿನ ಮಧ್ಯಾಹ್ನ ಕಳುಹಿಸಿದ್ದರು.