– ಸರ್ಕಾರದ ಮುಖ್ಯಕಾರ್ಯದರ್ಶಿಗೂ ಪತ್ರ
ಚಿಕ್ಕಬಳ್ಳಾಪುರ: ಪ್ರಿಯಕರನೊಬ್ಬ ರಕ್ತದಲ್ಲಿ ತನ್ನ ಪ್ರೇಮಿಗೆ ಪತ್ರ ಬರೆದು ಅದನ್ನು ದೇವರ ಹುಂಡಿಗೆ ಹಾಕಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀ ಭೋಗನಂಧೀಶ್ವರಸ್ವಾಮಿ ದೇವಸ್ಥಾನ ತುಂಬಾ ಪ್ರಸಿದ್ಧ. ಅಲ್ಲದೇ ಪುರಾಣ ಪ್ರಸಿದ್ಧ ಮುಜರಾಯಿ ಇಲಾಖೆಯ ಪ್ರಥಮ ದರ್ಜೆ ದೇವಸ್ಥಾನ ಕೂಡ ಆಗಿದೆ. ಹೀಗಾಗಿ ಇಲ್ಲಿಗೆ ಬಂದು ಭಕ್ತಿಯಿಂದ ಪ್ರಾರ್ಥಿಸಿ ಇಷ್ಟಾರ್ಥ ಕೋರಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಇದರಿಂದ ಪ್ರಿಯಕರನೊಬ್ಬ ರಕ್ತದಲ್ಲಿ ಪತ್ರ ಬರೆದು, ತನ್ನ ಪ್ರಿಯತಮೆಗೆ ಹುಟ್ಟು ಹಬ್ಬದ ಶುಭ ಕೋರಿ ಹುಂಡಿಗೆ ಹಾಕಿದ್ದಾನೆ.
ಮತ್ತೊಬ್ಬ ಭಕ್ತನೊಬ್ಬ ದೇವರ ಹುಂಡಿ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಗೆ ಇಂಗ್ಲಿಷ್ ನಲ್ಲಿ ಪತ್ರ ಬರೆದು ಮನವಿ ಮಾಡಿದ್ದಾನೆ.
ಪತ್ರದಲ್ಲಿ ಏನಿದೆ?
ವಿಷಯ: ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ತಾಲೂಕಿಗೆ ಮೂಲಭೂತ ಸೌಲಭ್ಯಗಳನ್ನ ಓದಗಿಸುವಂತೆ ಕೋರಿ.
22 ವರ್ಷದ ನಾನು ಹೆಸರು ವಿಳಾಸವನ್ನ ಬಹಿರಂಗಪಡಿಸುವುದಿಲ್ಲ. ಜಿಲ್ಲೆಯ ಬಾಗೇಪಲ್ಲಿ ಶಿಡ್ಲಘಟ್ಟ, ಚಿಂತಾಮಣಿ ತಾಲೂಕಿನಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆಗಳ ಸಮಸ್ಯೆಯಿದೆ. ಜಿಲ್ಲಾಡಳಿತದ ಅಧಿಕಾರಿಗಳ ಮೂಲಕ ಈ ಸಮಸ್ಯೆಗಳಿಗೆ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಹುಂಡಿಯಲ್ಲಿ ಮಕ್ಕಳು ಆಟ ಆಡಲು ಬಳಸುವ ಎರಡು ಸಾವಿರ ಮುಖ ಬೆಲೆಯ ನಕಲಿ ನೋಟುಗಳು ಹಾಗೂ ಅಮಾನ್ಯ ಮಾಡಲಾದ ಚಲಾವಣೆ ಇಲ್ಲದ 500 ಮುಖ ಬೆಲೆಯ ನೋಟುಗಳು ಕೂಡ ಕಂಡು ಬಂದಿದೆ. ಈ ರೀತಿಯ ಚಿತ್ರ ವಿಚಿತ್ರ ಹರಕೆಗಳಿಗೆ ಹಾಕಿರೋದಕ್ಕೆ ದೇವಸ್ಥಾನದ ಅರ್ಚಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಹುಂಡಿಯಲ್ಲಿ 15 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸಂಗ್ರಹವಾಗಿದೆ.