ಕಾರವಾರ: ಸುಮಾರು 10 ಲಕ್ಷ ಮೌಲ್ಯದ ಮೀನನ್ನು ಕಸದ ತೊಟ್ಟಿಗೆ ಎಸೆದು ಗೋವಾ ಸರ್ಕಾರದ ಅಧಿಕಾರಿಗಳು ಕರ್ನಾಟಕದ ಮೀನುಗಾರರ ಮೇಲೆ ಉದ್ಧಟತನ ತೋರಿದ್ದಾರೆ. ಕಾರವಾರದಿಂದ ರಾಮಣ್ಣ ಎಂಬವರಿಗೆ ಸೇರಿದ್ದ ಮೀನು ತುಂಬಿದ ಲಾರಿಯನ್ನು ಗೋವಾದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಕಸದ ತೊಟ್ಟಿಗೆ ಎಸೆದಿದ್ದಾರೆ.
ಗೋವಾದ ಆಹಾರ ಇಲಾಖೆಯ ಅನುಮತಿ ಪಡೆದು ಪಣಜಿಯಲ್ಲಿರುವ ಅಟ್ಲಾಸ್ ಕಂಪನಿಗೆ ಕೊಂಡೊಯ್ಯುವ ವೇಳೆ ಗಡಿಯಲ್ಲಿ ವಾಹನವನ್ನು ಆಹಾರ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ಬಳಿಕ ಪಣಜಿಯ ಎಫ್ಡಿಎ ಕಚೇರಿಗೆ ಕೊಂಡೊಯ್ದು ಎರಡು ದಿನ ಇಟ್ಟು ಫಾರ್ಮಲಿನ್ ಇಲ್ಲವೆಂದು ದೃಢಪಟ್ಟರೂ ಗಾಡಿಯನ್ನು ಬಿಡದೇ ಅಲ್ಲಿನ ನಗರಸಭೆಯ ಕಸದ ತೊಟ್ಟಿಗೆ ಎಸೆದು ಉದ್ಧಟತನ ತೋರಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ಕರ್ನಾಟಕದ ಮೀನಿನ ಮೇಲೆ ನಿಷೇಧ ಹೇರಿರುವ ಗೋವಾ ಸರ್ಕಾರ ಕೆಲವು ನಿಯಮಗಳನ್ನು ಜಾರಿ ಮಾಡಿ ಗೋವಾಕ್ಕೆ ತರಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಗೋವಾ ಸರ್ಕಾರದ ನಿಯಮವನ್ನು ಅನುಸರಿಸಿದರೂ ಆಹಾರ ಇಲಾಖೆ ಅನುಮತಿ ಪಡೆದು ಶಿಥಿಲೀಕರಣ ವಾಹನದಲ್ಲಿ ಮೀನು ತರುವಂತೆ ಆದೇಶವನ್ನು ಪಾಲನೆ ಮಾಡಲಾಗಿತ್ತು. ಆದರೂ ಕೂಡ ಗಡಿಯಲ್ಲಿ ಕರ್ನಾಟಕದ ವಾಹನ ತಡೆದು ನಂತರ ಪಣಜಿ ನಗರಸಭೆಗೆ ವಾಹನ ತೆಗೆದುಕೊಂಡು ಹೋಗಿ ಅದರಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಮೀನನ್ನ ಕಸಕ್ಕೆ ಎಸೆದಿದೆ.
ಒಟ್ಟಿನಲ್ಲಿ ಕೇವಲ ಕರ್ನಾಟಕದ ಮೇಲೆ ಟಾರ್ಗೆಟ್ ಮಾಡಿ ಮಲತಾಯಿ ಧೋರಣೆ ತೊರಿಸುವ ಗೋವಾ ಸರ್ಕಾರದ ವಿರುದ್ಧ ಕಾರವಾರ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಡೆ ಹಿಡಿಯುತ್ತಿರುವುದು ಯಾಕೆ?
ಫಾರ್ಮಲಿನ್ ರಾಸಾಯಲಿಕ ಪತ್ತೆಯಾಗಿದ್ದರಿಂದ ಹೊರರಾಜ್ಯಗಳಿಂದ ಮೀನು ಆಮದನ್ನು ಗೋವಾ ಸರ್ಕಾರವು ಜುಲೈ ತಿಂಗಳಿನಿಂದ ನಿರ್ಬಂಧಿಸಿತ್ತು. ಅಷ್ಟೇ ಅಲ್ಲದೇ ನವೆಂಬರ್ ಎರಡನೇ ವಾರದಲ್ಲಿ ಅಧಿಕೃತ ಆದೇಶವನ್ನು ಹೊರಡಿಸಿತ್ತು. ನಿರ್ಬಂಧದಿಂದಾಗಿ ಕರ್ನಾಟಕದ ಮೀನುಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಬಿಸಿ ಮುಟ್ಟಿತ್ತು. ಇದರಿಂದಾಗಿ ಕರ್ನಾಟಕದ ಮೀನುಗಾರರನ್ನು ಗುರಿಯಾಗಿಸಿಕೊಂಡು ಮೀನು ಲಾರಿಗಳನ್ನು ಗೋವಾ-ಕಾರವಾರದ ಗಡಿಭಾಗದಲ್ಲಿ ತಡೆದು ನಿಲ್ಲಿಸಲಾಗಿತ್ತು. ಗೋವಾಕ್ಕೆ ಆಮದು ಆಗುತ್ತಿದ್ದ ಮೀನಿನ ಮೇಲೆ ಸಂಪೂರ್ಣ ನಿರ್ಬಂಧ ಹೊರಡಿಸಿದ್ದರಿಂದ ರಾಜ್ಯದ ಮೀನು ಬೆಳೆಗಾರರು ಭಾರೀ ನಷ್ಟ ಎದುರಿಸಿದ್ದರು. ಬಳಿಕ ಕೆಲ ನಿಯಮಗಳನ್ನು ಸಡಿಲಿಸಿ ಮೀನು ವ್ಯಾಪಾರಿಗಳಿಗೆ ಗೋವಾಗೆ ತರಲು ಅನುಮತಿ ನೀಡಿತ್ತು.
https://www.youtube.com/watch?v=PcwI1RtvWqs
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv