ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ ಗ್ಯಾಂಗ್ ವಾರ್ ಶುರುವಾಗಿದೆ. ನಾಗರಾಜ್ ಅಲಿಯಾಸ್ ಬುಳ್ಳನಾಗ ಮತ್ತು ಸಹಚರರ ಮೇಲೆ ರಾತ್ರೋರಾತ್ರಿ ದಾಳಿ ನಡೆದಿದ್ದು, ಮತ್ತೊಮ್ಮೆ ಬೆಣ್ಣೆನಗರಿ ಜನ ಬೆಚ್ಚಿ ಬೀಳುವಂತಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಮಾರಪಟ್ಟಣಂ ಸಮೀಪದ ಸೇತುವೆ ಬಳಿ 15ಕ್ಕೂ ಹೆಚ್ಚು ಸುಪಾರಿ ಕಿಲ್ಲರ್ಸ್ ರೌಡಿ ಶೀಟರ್ ಬುಳ್ಳನಾಗನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬುಳ್ಳನಾಗ ಮತ್ತು ಸಹಚರರು ಕುಮಾರಪಟ್ಟಣಂ ಮಾರ್ಗವಾಗಿ ದಾವಣಗೆರೆಗೆ ಬರುವಾಗ ಇನ್ನೋವಾ ಕಾರು ಅಡ್ಡಗಟ್ಟಿ ಒಮ್ಮೆಲೆ ಅಟ್ಯಾಕ್ ಮಾಡಿದ್ದಾರೆ.
ಈ ವೇಳೆ ಬುಳ್ಳನಾಗ ಮತ್ತು ಇಬ್ಬರು ಸಹಚರರಿಗೆ ಗಂಭೀರ ಗಾಯಗಳಾಗಿವೆ. ಇನ್ನೋವಾ ಕಾರಿನ ಗಾಜುಗಳು ಜಖಂ ಆಗಿವೆ. ಅಟ್ಯಾಕ್ ಆಗುತ್ತಿದ್ದಂತೆ ಬುಳ್ಳನಾಗನ ಕಾರು ಚಾಲಕ ಕಾರು ಜೋರಾಗಿ ಚಲಾಯಿಸಿಕೊಂಡು ಬಂದು ಪರಾರಿಯಾಗಿದ್ದಾರೆ. ಈ ಹಿಂದೆ ಬುಳ್ಳನಾಗನನ್ನ ಕೊಲೆ ಮಾಡೋದಕ್ಕೆ ಸಂತೋಷ್ ಅಲಿಯಾಸ್ ಕಣುಮ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ರೌಡಿಗಳಿಗೆ ಸುಪಾರಿ ಕೊಟ್ಟಿದ್ದ.
ಎರಡು ತಿಂಗಳ ಹಿಂದೆ ದಾವಣಗೆರೆ ಪೊಲೀಸರು 7 ಮಂದಿ ಸುಪಾರಿ ಕಿಲ್ಲರ್ಸ್ ಗಳನ್ನ ಬಂಧಿಸಿದ್ದರು. ಈಗಲೂ ಕೂಡ ಸಂತೋಷ್ ಅಲಿಯಾಸ್ ಕಣುಮ, ಶ್ರೀನಿವಾಸ್ ಅಲಿಯಾಸ್ ಮೋಟ್ ಬಳ್ ಸೀನ, ಗೋವಿಂದ ಎಂಬವರು ಅಟ್ಯಾಕ್ ಮಾಡಿಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಬುಳ್ಳನಾಗ ಆರೋಪಿಸಿದ್ದಾನೆ.