ನವದೆಹಲಿ: ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ನನ್ನ (Goldy Brar) ಭಯೋತ್ಪಾದಕ ಎಂದು ಸೋಮವಾರ ಕೇಂದ್ರ ಸರ್ಕಾರ ಘೋಷಿಸಿದೆ.
ದರೋಡೆಕೋರ ಗೋಲ್ಡಿ ಬ್ರಾರ್ನನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಭಯೋತ್ಪಾದಕ ಎಂದು ಘೋಷಿಸಿದೆ. ಈತ ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ (Babbar Khalsa International) ಜೊತೆಗೆ ಸಂಬಂಧ ಹೊಂದಿದ್ದಾನೆ ಎಂದು ಗೃಹ ಸಚಿವಾಲಯ (Home Ministry) ಪ್ರಕಟಣೆಯಲ್ಲಿ ತಿಳಿಸಿದೆ.
ಗೋಲ್ಡಿ ಬ್ರಾರ್ ಗಡಿಯಾಚೆಗಿನ ಏಜೆನ್ಸಿಗಳಿಂದ ಬೆಂಬಲಿತನಾಗಿ ಅನೇಕ ಹತ್ಯೆಗಳಲ್ಲಿ ತೊಡಗಿಸಿಕೊಂಡಿದ್ದು ಉಗ್ರವಾದದ ಆಮೂಲಾಗ್ರ ಸಿದ್ಧಾಂತ ಪ್ರತಿಪಾದಿಸಿದ್ದಾನೆ. ರಾಷ್ಟ್ರವಾದದ ಪರ ನಾಯಕರಿಗೆ ಬೆದರಿಕೆ ಕರೆಗಳನ್ನ ಹಾಕಿದ್ದಾನೆ. ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಾನೆ ಎಂದು ಗೃಹ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು
ಗಡಿಯಾಚೆಯಿಂದ ಡ್ರೋನ್ಗಳ ಮೂಲಕ ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು ಮತ್ತು ಸ್ಫೋಟಕಗಳನ್ನ ಕಳ್ಳಸಾಗಣಿಕೆಯಲ್ಲೂ ತೊಡಗಿಸಿಕೊಂಡಿದ್ದು, ಹತ್ಯೆಗಳನ್ನು ನಡೆಸಲು ಶಾರ್ಪ್ ಶೂಟರ್ಗಳಿಗೆ ಸರಬರಾಜು ಮಾಡುತ್ತಿದ್ದ. ಆತನ ಸಹಚರರು ವಿಧ್ವಂಸಕ ಕೃತ್ಯಗಳು, ಭಯೋತ್ಪಾದನಾ ಘಟಕಗಳನ್ನು ಹೆಚ್ಚಿಸುವುದು, ಉದ್ದೇಶಿತ ಹತ್ಯೆಗಳನ್ನು ನಡೆಸುವುದು ಮತ್ತು ಇತರ ದೇಶ ವಿರೋಧಿ ಯೋಜನೆಗಳ ಮೂಲಕ ಪಂಜಾಬ್ ರಾಜ್ಯದಲ್ಲಿ ಶಾಂತಿ, ಕೋಮು ಸೌಹಾರ್ದತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಹಾಳುಮಾಡಲು ಪಿತೂರಿ ನಡೆಸಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ.
ಸಿಧು ಮೂಸೆವಾಲಾ ಹತ್ಯೆಯ ದಿನಗಳ ನಂತರ, 2022ರ ಜೂನ್ನಲ್ಲಿ ಗೋಲ್ಡಿ ಬ್ರಾರ್ ಅವರ ಹಸ್ತಾಂತರಕ್ಕಾಗಿ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಆ ನಂತರ ಕ್ಯಾಲಿಫೋರ್ನಿಯಾದಲ್ಲಿ ಆತನನ್ನ ಬಂಧಿಸಲಾಗಿತ್ತು ಎಂದು ಭಾರತದ ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿದ್ದವು. ಇದನ್ನೂ ಓದಿ: ರಾಮಜನ್ಮಭೂಮಿ ನಮಗೆ ಮತ ಪಡೆಯುವ ರಾಜಕೀಯ ವಿಚಾರವಲ್ಲ: ರಾಜನಾಥ್ ಸಿಂಗ್