ನವದೆಹಲಿ: ಉಪ ಚುನಾವಣೆಯಲ್ಲಿ ಬಿಜೆಪಿ ಪ್ರತಿ ಮತಕ್ಕೆ ಹತ್ತು ಸಾವಿರ ರೂಪಾಯಿ ನೀಡಿದೆ, ಕಾಂಗ್ರೆಸ್ ಕೂಡ ಈ ವಿಚಾರದಲ್ಲೂ ಹಿಂದೆ ಉಳಿದಿಲ್ಲ. ಹೀಗಾಗಿ ಎರಡು ಕ್ಷೇತ್ರದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಉಭಯ ಪಕ್ಷಗಳು ಗೆದ್ದುಕೊಂಡಿವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಉಪ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಮಾತಮಾಡಿದ ಅವರು, ಸಿಂದಗಿಯಲ್ಲಿ ಹಿಂದೂ ಮುಸ್ಲಿಂ ಬೇಧ ಇರಲಿಲ್ಲ. ಹೀಗಾಗಿ ಮುಸ್ಲಿ ಅಭ್ಯರ್ಥಿಗೆ ಟಿಕೇಟ್ ನೀಡಿದ್ದೆವು. ಆದರೆ ನಮಗೆ ಲಿಂಗಾಯತರು ಮತ ಹಾಕಿಲ್ಲ ಎಂದು ಆರೋಪಿಸಿದರು.
ಸಿಂದಗಿ ಮತ್ತು ನನಗೂ ಹಿಂದಿನಿಂದ ಸಂಬಂಧ ಇದೆ. ಈ ಹಿನ್ನೆಲೆ ಉಪ ಚುನಾವಣೆಗೆ ಪ್ರಚಾರ ಮಾಡಲು ತೆರಳಿದ್ದೆ. 40 ವರ್ಷದ ಹಿಂದೆ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಹೇಳಿದೆ. ಮತ ಹಾಕುವ ಭರವಸೆ ಜನರು ನೀಡಿದ್ದರು. ಆದರೆ ಎರಡು ರಾಷ್ಟ್ರೀಯ ಪಕ್ಷಗಳ ಹಣ ರಾಜಕೀಯ ಎದುರು ನಮಗೆ ಸೋಲಾಗಿದೆ ಎಂದರು. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಕಾಂಗ್ರೆಸ್ ನಡೆಸಿದ ಅಪಪ್ರಚಾರಕ್ಕೆ ಫಲಿತಾಂಶವೇ ಉತ್ತರ ನೀಡಿದೆ: ಹೆಚ್ಡಿಕೆ
ಈ ಸೋಲಿನಿಂದ ನಾವು ಧೃತಿಗೆಡುವುದಿಲ್ಲ, ನಾವು 2023ರ ಚುನಾವಣೆಗೆ ಸಿದ್ಧವಾಗುತ್ತೇವೆ. ರಾಷ್ಟ್ರೀಯ ಪಕ್ಷಗಳ ಸಾರ್ವತ್ರಿಕ ಚುನಾವಣೆಗೆ ಹೆಚ್ಚು ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಆಗ ನಾವು ಗೆಲ್ಲಲ್ಲಿದ್ದೇವೆ. ಇನ್ನು ಒಂದೂವರೆ ವರ್ಷ ಸಮಯ ಇದೆ. ಈ ಅವಧಿಯಲ್ಲಿ ಪಕ್ಷ ಕಟ್ಟುತ್ತೆವೆ, ಈಗಾಗಲೇ ಮಿಷನ್ 123 ಹೆಸರಿನಲ್ಲಿ ಸಮಾವೇಶ ಮಾಡಿದ್ದೇವೆ ಸಂಘಟನೆ ಬಲಗೊಳಿಸುತ್ತಿದ್ದೇವೆ ಎಂದರು.
ಹಳೆ ಮೈಸೂರು ಭಾಗದಲ್ಲಿ ಹೆಚ್.ಡಿ ಕುಮಾರಸ್ವಾಮಿ ಪಕ್ಷವನ್ನು ಸಂಘಟಿಸಲಿದ್ದಾರೆ. ನಾನು ಉತ್ತರ ಕರ್ನಾಟಕದ ಜವಬ್ದಾರಿ ತೆಗೆದುಕೊಳ್ಳಲಿದ್ದೇನೆ. ತಿಂಗಳಿಗೆ ಎರಡು ಜಿಲ್ಲೆಗಳ ಪ್ರವಾಸ ಮಾಡಲಿದ್ದೇವೆ. ಮೈಸೂರು ಭಾಗದಲ್ಲಿ ಜಿ.ಟಿ ದೇವೇಗೌಡ, ಪುತ್ರ ಕುಮಾರಸ್ವಾಮಿ ಪುತ್ರನ ಜೊತೆಗೆ ಮಾತುಕತೆ ನಡೆಸಿದ್ದು ನಾವು ಯುವಕರ ನಿರ್ಧಾರಕ್ಕೆ ಒಪ್ಪಿಗೆ ನೀಡಲಿದ್ದೇವೆ. ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆಗೊಳ್ಳಲಿದೆ ಎಂದು ಹೆಚ್.ಡಿ ದೇವೇಗೌಡ ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾನಗಲ್ನಲ್ಲಿ ಕಾಂಗ್ರೆಸ್ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ