-ಮಾರುಕಟ್ಟೆಯಲ್ಲೇ ರಾಶಿ, ರಾಶಿ ಹೂ ಬಿಸಾಡಿದ ರೈತರು
ಚಿಕ್ಕಬಳ್ಳಾಪುರ: ಶ್ರಾವಣ ಮಾಸ ಮುಗಿದು ಈಗ ಪಿತೃ ಪಕ್ಷ ಆರಂಭವಾಗಿದ್ದು, ಶುಭ ಕಾರ್ಯಗಳಿಗೆ ಬ್ರೇಕ್ ಬಿದ್ದಿದೆ. ಇದರ ಪರಿಣಾಮ ಶುಭ ಸಮಾರಂಭಗಳು ಇಲ್ಲದ ಕಾರಣ, ಹೂವಿಗೆ ಬೇಡಿಕೆ ಕಡಿಮೆಯಾಗಿದ್ದು ಹೂ ಬೆಳೆದ ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗಿದೆ.
ಕೊರೊನಾ ಹೊಡೆತದ ಮಧ್ಯೆ ಶ್ರಾವಣ ಮಾಸದಲ್ಲಿ ಸಾಲು, ಸಾಲು ಹಬ್ಬಗಳಿಂದ ಹೂ ಬೆಲೆ ದುಬಾರಿಯಾಗಿ ರೈತರಿಗೆ ಸಖತ್ ಸಂತಸ ತಂದಿತ್ತು. ಆದರೀಗ ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಪಿತೃ ಪಕ್ಷ ಆರಂಭವಾಗಿ ಚಿಕ್ಕಬಳ್ಳಾಪುರ ನಗರದ ಹೂವಿನ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಚೆಂಡು ಹೂ 5 ರೂಪಾಯಿ, ಗುಲಾಬಿ ಹೂ ಸಹ 1 ಕೆಜಿಗೆ 5 ರೂಪಾಯಿ, ಸೇವಂತಿಗೆ 10 ರೂಪಾಯಿಗೆ ಬಿಕರಿಯಾಗಿದೆ. ಇದರಿಂದ ಮಾರುಕಟ್ಟೆಗೆ ಹೂ ತಂದ ರೈತರು ನಿರೀಕ್ಷಿತ ಬೆಲೆ ಸಿಗದೇ ತಂದ ಹೂಗಳನ್ನ ಮಾರುಕಟ್ಟೆಯಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದ ತಂದೆ
ಹತ್ತಾರು ಎಕರೆಯ ಮಾರುಕಟ್ಟೆಯ ಸುತ್ತಲೆಲ್ಲಾ ಹೂಗಳ ರಾಶಿ ತುಂಬಿದೆ. ಟನ್ ಗಟ್ಟಲೇ ಹೂಗಳನ್ನು ಬಿಸಾಡಲಾಗಿದ್ದು, ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಕನಿಷ್ಟ ಹೂ ಕೀಳುವ ಕೂಲಿಯಾಳುಗಳು ಹಾಗೂ ಟೆಂಪೋ ಬಾಡಿಗೆ ಸಹ ಬರುತ್ತಿಲ್ಲ ಅಂತ ಹೂ ಬೆಳೆಗಾರರು ಅಳಲು ತೊಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಹೂಗಳ ರಾಶಿಯೇ ಕಣ್ಣಿಗೆ ಕಾಣುತ್ತಿದೆ. ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಚೆಂಡು ಹೂ, ಗುಲಾಬಿ, ಸೇವಂತಿಗೆ ಹೂ ಬೆಳೆಯುತ್ತಾರೆ. ಹೀಗಾಗಿ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಿಂದ ದೇಶದ ಇತರೆ ರಾಜ್ಯಗಳಿಗೆ ಹೂ ಎಕ್ಸ್ಪೋರ್ಟ್ ಮಾಡಲಾಗುತ್ತದೆ. ಆದರೆ ಈಗ ಹೂಗಳನ್ನು ಕೇಳುವವರು, ಇಲ್ಲದಂತಾಗಿ ರೈತರು ವರ್ತಕರು ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನೂ ಓದಿ: ಮಗು ಪ್ರವೇಶಿಸಿ ಅಪವಿತ್ರವಾಯ್ತೆಂದು ಪೋಷಕರಿಗೆ ದೇಗುಲ ಶುದ್ಧೀಕರಣದ ಜೊತೆಗೆ 10 ಸಾವಿರ ದಂಡ!