ಉಡುಪಿ: ಇಲ್ಲಿನ ಕೊಡವೂರು ಚೆನ್ನಂಗಡಿ ಸಮೀಪ ನದಿಗೆ ಕಾರೊಂದು ಬಿದ್ದು, ಅದರಲ್ಲಿದ್ದ ಚಾಲಕ ಹಾಗೂ ಮೂರು ವರ್ಷದ ಮಗುವನ್ನು ಮೀನುಗಾರರೊಬ್ಬರು ಸಾಹಸದಿಂದ ರಕ್ಷಿಸಿದ ಘಟನೆ ನಡೆದಿದೆ.
ಕಾರು ನದಿಗೆ ಬಿದ್ದಿರುವುದನ್ನು ಗಮನಿಸಿದ ಮೀನುಗಾರ ಗಣೇಶ್ ಚೆನ್ನಂಗಡಿ, ತಕ್ಷಣ ತಮ್ಮ ಪ್ರಾಣದ ಹಂಗು ತೊರೆದು ನದಿಗೆ ಧುಮುಕಿದರು. ಕಾರಿನೊಳಗೆ ಸಿಲುಕಿದ್ದ ಚಾಲಕ ಹಾಗೂ ಮೂರು ವರ್ಷದ ಮಗುವನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರುವಲ್ಲಿ ಯಶಸ್ವಿಯಾದರು.
ನೀರಿನ ಸೆಳೆತದ ನಡುವೆಯೂ ಧೈರ್ಯದಿಂದ ಕಾರ್ಯಾಚರಣೆ ನಡೆಸಿ ಇಬ್ಬರ ಜೀವ ಉಳಿಸಿದ ಗಣೇಶ್ ಅವರ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಸ್ಥಳೀಯರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

