ಚಿತ್ರದುರ್ಗ: ಕಿಡಿಗೇಡಿಗಳು ಬೆಂಕಿ ಹಾಕಿರುವ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ನಗರದ ಜೋಗಿಮಟ್ಟಿ ಗಿರಿಧಾಮವು ಹೊತ್ತಿ ಉರಿದಿದೆ.
ಒಣಹುಲ್ಲಿಗೆ ಬೆಂಕಿ ತಗುಲಿದ ಪರಿಣಾಮ ಜೋಗಿಮಟ್ಟಿ ಅರಣ್ಯಧಾಮದಲ್ಲಿದ್ದ ಅಪಾರ ಔಷಧಿ ಸಸಿಗಳು, ಗಿಡಮೂಲಿಕೆಗಳು ಹಾಗೂ ಕೆಲ ಬೆಲೆಬಾಳುವ ಗಿಡಮರಗಳು ಸರ್ವನಾಶವಾಗಿವೆ. ಹೀಗಾಗಿ ಕೋಟೆನಾಡಿನ ಪರಿಸರವಾದಿಗಳು ಕಿಡಿಗೇಡಿಗಳ ದುಷ್ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕಾಡಿಗೆ ಬೆಂಕಿ ಬಿದ್ದಿರುವ ವಿಚಾರ ತಿಳಿದ ಅಗ್ನಿಶಾಮಕದಳವು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಕ್ಷಣಾರ್ಧದಲ್ಲೇ ಆಡುಮಲ್ಲೇಶ್ವರ ರಸ್ತೆಯ ಸದ್ಗುರು ಸೇವಾಶ್ರಮದವರೆಗೆ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ
ಸೂಕ್ತ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದ ಅಗ್ನಿಶಾಮಕದಳದ ಸಿಬ್ಬಂದಿಯು ಕಾರ್ಯಪ್ರವೃತ್ತರಾಗದಿದ್ದರೆ ಆಶ್ರಮ ಸೇರಿದಂತೆ ಸಮೀಪದಲ್ಲಿದ್ದ ಕ್ಯಾಂಟೀನ್ ಸಹ ಬೆಂಕಿಗೆ ಆಹುತಿಯಾಗುವ ಆತಂಕ ಎದುರಾಗಿತ್ತು. ಇಷ್ಟೆಲ್ಲಾ ಅವಾಂತರ ನಡೆದರೂ ಸಹ ಯಾವೊಬ್ಬ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಧಾವಿಸದೇ ಕೇವಲ ಡಿ ದರ್ಜೆಯ ನೌಕರರು ಮಾತ್ರ ಬೆಂಕಿ ನಂದಿಸಲು ಮುಂದಾಗಿದ್ದರು. ಘಟನೆಯು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಘಟನೆಯು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಮಗನ ಮೇಲೆ ಅತ್ಯಾಚಾರ ಆರೋಪ- ಸುಳ್ಳು, ಆಧಾರರಹಿತ ಎಂದ ಕೈ ಶಾಸಕ