ರಾಮನಗರ: ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಮಟ್ಟದ ಖೋಟಾ ನೋಟ್ ತಯಾರಿಕಾ ಜಾಲವನ್ನು ರಾಮನಗರ ಪೊಲೀಸರು(Ramanagara Police) ಭೇದಿಸಿದ್ದಾರೆ. ನಿರ್ಮಾಣ ಹಂತದ ಮನೆಯೊಂದರಲ್ಲಿ ನಕಲಿ ನೋಟು(Fake Note) ತಯಾರಿಸುತ್ತಿದ್ದ ಖತರ್ನಾಕ್ ತಂಡವನ್ನು ಪೊಲೀಸರು(Police) ಬಂಧಿಸಿದ್ದು, ಸ್ಥಳದಲ್ಲಿ ಕೆಮಿಕಲ್ ಸೇರಿದಂತೆ ಹಲವು ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.
ರಾಮನಗರ ಟೌನ್ ವ್ಯಾಪ್ತಿಯ ಶಾಂತಿಲಾಲ್ ಲೇಔಟ್ ನಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಮನೆಯಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಐಜೂರು ಇನ್ಸ್ಪೆಕ್ಟರ್ ರಮೇಶ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ದಾಳಿ ವೇಳೆ ಮನೆಯಲ್ಲಿ ಏಳು ಮಂದಿ ಪತ್ತೆಯಾಗಿದ್ದು, ಎಲ್ಲರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಪತ್ ಎಂಬಾತ ಈ ಖೋಟಾ ನೋಟ್ ತಯಾರಿಕಾ ಜಾಲದ ಕಿಂಗ್ ಪಿನ್ ಎನ್ನಲಾಗಿದೆ. ಈತ ಮನೆ ಮಾಲೀಕ ಸಂತೋಷ್ ನಿಗೆ ಕಮಿಷನ್ ಆಸೆ ತೋರಿಸಿ, ನಿರ್ಮಾಣ ಹಂತದ ಮನೆಯಲ್ಲೇ ನಕಲಿ ನೋಟು ತಯಾರಿಕೆಗೆ ಮುಂದಾಗಿದ್ದ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ದಾಳಿ ವೇಳೆ ಸಂತೋಷ್, ಸಂಪತ್, ಗೋವಿಂದಾರಾಜ್, ರೇಣುಕಾರಾಜ್, ರಾಜೇಶ್, ಶಿವರಾಜ್ ಮತ್ತು ಸತೀಶ್ ಎಂಬ ಏಳು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೇಪರ್ ಬಂಡಲ್, ಕೆಮಿಕಲ್ ಸೇರಿದಂತೆ ಹಲವು ಅನುಮಾನಸ್ಪದ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಲ್ಲಿ 200 ಮತ್ತು 500 ಮುಖಬೆಲೆಯ ಖೋಟಾ ನೋಟು ತಯಾರಿಸಲು ಪೇಪರ್ ಗಳನ್ನ ರೆಡಿ ಮಾಡಲಾಗುತ್ತಿತ್ತು. ವೈಟ್ ಪೇಪರ್ ನ ಬಂಡಲ್ ಗೆ ಕೆಮಿಕಲ್ ಬಳಿದು ಅದನ್ನ ನೋಟ್ ಸೈಜ್ ಗೆ ಕಟ್ ಮಾಡಿ ಒಣಗಿಸಲಾಗುತ್ತಿತ್ತು. ಒಟ್ಟು 5 ಲಕ್ಷ ರೂ. ಮೌಲ್ಯದ ನಕಲಿ ನೋಟಿಗೆ ಇಲ್ಲಿ ಪೇಪರ್ ರೆಡಿ ಮಾಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿ ತಯಾರಾದ ಪೇಪರ್ ಗಳನ್ನ ಬೇರೆಕಡೆಗೆ ರವಾನೆ ಮಾಡಿ ಅಲ್ಲಿ ಪೂರ್ಣ ಪ್ರಮಾಣದ ನಕಲಿ ನೋಟ್ ತಯಾರಿಸುವ ಕೆಲಸ ಆಗುತ್ತಿತ್ತು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಶ್ರೀನಿವಾಸ್ ಗೌಡರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಜಾಲದ ಹಿಂದೆ ಮತ್ತಷ್ಟು ಜನ ಭಾಗಿಯಾಗಿರುವ ಸಾಧ್ಯತೆ ಇದ್ದು, ಬುಡಸಮೇತ ಕಿತ್ತುಹಾಕುತ್ತೇವೆ ಎಂದು ಎಸ್ಪಿ ರೋಹನ್ ಜಗದೀಶ್ ಭರವಸೆ ನೀಡಿದ್ದಾರೆ. ಎಫ್ಎಸ್ಎಲ್ ತಂಡ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
