– ಜೆಡಿಎಸ್ ಕಾರ್ಯಕರ್ತರಿಗೆ, ಪೇಜ್ ಅಡ್ಮಿನ್ಗೆ ನೆಟ್ಟಿಗರಿಂದ ಕ್ಲಾಸ್
– ಕೆ.ಆರ್.ಪೇಟೆ ಬಗ್ಗೆ ಮಾತನಾಡಲು ನೀವು ಯಾರು?
ಮಂಡ್ಯ: ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವು ಪಡೆದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಫೇಸ್ಬುಕ್ ಖಾತೆಯಲ್ಲಿ ಕ್ಷೇತ್ರದ ಮತದಾರರನ್ನು ನಿಂದಿಸಿ ಪೋಸ್ಟ್ ಮಾಡಲಾಗಿದೆ.
‘ನಿಖಿಲ್ ಕುಮಾರಸ್ವಾಮಿ ಸಪೋರ್ಟರ್ಸ್’ ಎಂಬ ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಡಿ.ಕೆ ಸಿನಿಮಾದ ವಿಡಿಯೋ ತುಣುಕನ್ನು ಹಾಕಿ ಅವಾಚ್ಯ ಶಬ್ದಗಳಿಂದ ಮತದಾರರನ್ನು ನಿಂದಿಸಲಾಗಿದೆ. ಕೆ.ಆರ್ ಪೇಟೆ ಮತದಾರರ ತಾಯಿ ಕುರಿತು ಅವಹೇಳನವಾಗಿ ಪೋಸ್ಟ್ ಹಾಕಲಾಗಿದೆ. ಮತದಾರರು ದುಡ್ಡಿಗಾಗಿ ತಾಯಿಯನ್ನೇ ಮಾರಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ಈ ಬಗ್ಗೆ ಫೇಸ್ಬುಕ್ಕಿಗರು ಕಮೆಂಟ್ ಮೂಲಕ ಜೆಡಿಎಸ್ ಕಾರ್ಯಕರ್ತರನ್ನು ಹಾಗೂ ಅಡ್ಮಿನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಕೆ.ಆರ್ ಪೇಟೆಯ ಬಗ್ಗೆ ಮಾತನಾಡಲು ನೀವು ಯಾರು? ನೀವೇನ್ ಸಾಚಾನಾ? ಮೊದಲು ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಕಟ್ಟಿ, ಕೈಗೆ ಎಟುಕದ ದ್ರಾಕ್ಷಿಯನ್ನು ಹುಳಿ ಅಂತೀರಾ. ನೀವು ಎಂಪಿ ಚುನಾವಣೆಯಲ್ಲಿ ದುಡ್ಡು ಹಂಚಲಿಲ್ವಾ? ಬೇರೆ ಅವರಿಗೆ ಹೇಳೋ ಮುಂಚೆ ನೀವು ನೆಟ್ಟಗೆ ಇರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಹಲವಾರು ರೀತಿ ಕಮೆಂಟ್ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರಿಗೆ ಫೇಸ್ಬುಕ್ಕಿಗರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದಲ್ಲದೇ ದೇವೇಗೌಡರ ಕೈ ಮುಗಿಯುವ ಫೋಟೋ ಒಂದನ್ನು ಹಾಕಿ ದಯವಿಟ್ಟು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಮರ್ಯಾದೆ ಕಳೆಯ ಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ನ ಕುರಿತು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.