ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಉಲ್ಲೇಖಿಸಿ ಕಾಂಗ್ರೆಸ್ (Congress) ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ವಿವಿಧ ಕಾಮಗಾರಿ ಲೋಕಾರ್ಪಣೆ ಮತ್ತು ವಿವಿಧ ಯೋಜನೆಗಳ ಶಂಕುಸ್ಥಾಪನೆ ನಡೆಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅವಮಾನ ಮಾಡುತ್ತಲೇ ಬಂದಿದೆ. ನಿಜಲಿಂಗಪ್ಪ-ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ದೂರಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಭರ್ಜರಿ ರೋಡ್ ಶೋ – ಮೋದಿಯಿಂದ ಮತ ಬೇಟೆ
ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕರಿಗೆ ಸಾಧ್ಯವಿರುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅತ್ಯಂತ ಹಿರಿಯ ನಾಯಕನಾದ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಇದೇ ಭೂಮಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಗೌರವಿಸುತ್ತೇನೆ. ನನಗೆ ಕೆಲ ದಿನಗಳ ಹಿಂದೆ ಖರ್ಗೆ ಪರಿಸ್ಥಿತಿ ನೋಡಿ ದುಃಖವಾಯಿತು ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.
ಛತ್ತೀಸ್ಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಸಿಲು ಇತ್ತು. ಖರ್ಗೆಯವರು ಸೂರ್ಯನ ಕೆಳಗೆ ನಿಂತಿದ್ದರು. ಅವರಿಗೆ ಯಾರು ಕೊಡೆ ನೀಡಲಿಲ್ಲ. ಅವರಿಗೆ ಛತ್ರಿ ಸಿಕ್ಕಿರಲಿಲ್ಲ. ಆದರೆ ಬೇರೆಯವರಿಗೆ ಛತ್ರಿ ಸಿಕ್ಕಿತ್ತು. ಹೆಸರಿಗೆ ಖರ್ಗೆ ಮಾತ್ರ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಆದರೆ ಯಾರ ಬಳಿ ರಿಮೋಟ್ ಕಂಟ್ರೋಲ್ ಇದೆ ಎಂಬುದು ಜಗತ್ತಿಗೆ ಗೊತ್ತಿದೆ ಎಂದು ಹೇಳಿದರು.
ನನಗೆ ಹಳ್ಳ ತೋಡುವುದರಲ್ಲಿ ಕೆಲವರು ಬ್ಯುಸಿಯಾಗಿದ್ದಾರೆ. ಆದರೆ ದೇಶದಲ್ಲಿ ಕಮಲ ಅರಳುತ್ತದೆ. ಸತ್ಯದ ಹಾದಿಯಲ್ಲಿ ಕೆಲಸ ಮಾಡಿದಾಗ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಛತ್ತೀಸ್ಗಢದಲ್ಲಿ ಏನಾಗಿತ್ತು?
ಕಾಂಗ್ರೆಸ್ ಮಹಾಅಧಿವೇಶನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು. ಈ ಸಂದರ್ಭದಲ್ಲಿ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ವೇದಿಕೆಯಲ್ಲಿ ನಿಂತಿದ್ದರು. ಸೋನಿಯಾ ಗಾಂಧಿ ಅವರಿಗೆ ಆಪ್ತ ರಕ್ಷಕರು ಛತ್ರಿ ಹಿಡಿದು ನಿಂತಿದ್ದರೆ ಖರ್ಗೆ ಅವರು ಬಿಸಿಲಿನಲ್ಲೇ ನಿಂತುಕೊಂಡಿದ್ದರು. ಈ ವಿಚಾರವನ್ನು ಮೋದಿ ಪ್ರಸ್ತಾಪ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.